ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಭಾನುವಾರ ವೀರ ಭೂಮಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಗೌರವ ಸಲ್ಲಿಸಿದರು. ಪಕ್ಷದ ಉನ್ನತ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದರು.
ಇನ್ನುಳಿದಂತೆ ದೆಹಲಿ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಕುಮಾರ್ ಚೌಧರಿ ಕೂಡ ರಾಜೀವ್ ಗಾಂಧಿಗೆ ನಮನ ಸಲ್ಲಿಸಿದರು. ಇದಕ್ಕೂ ಮೊದಲು, ಕಾಂಗ್ರೆಸ್ ತನ್ನ ಅಧಿಕೃತ ಖಾತೆ ಎಕ್ಸ್ (ಈ ಹಿಂದಿನ ಟ್ವಿಟರ್) ನಲ್ಲಿ ಮಾಜಿ ಪ್ರಧಾನಿ ಕುರಿತು ಹೀಗೆ ಹೇಳಿದೆ.
“21 ನೇ ಶತಮಾನದ ಭಾರತದ ವಾಸ್ತುಶಿಲ್ಪಿ ರಾಜೀವ್ ಗಾಂಧಿ ಅವರನ್ನು ‘ಮಾಹಿತಿ ತಂತ್ರಜ್ಞಾನದ ಪಿತಾಮಹ’ ಎಂದು ಹೇಳುವುದು ನಿಜವಾಗಿಯೂ ಅರ್ಥಪೂರ್ಣ. ಅವರ ದೂರದೃಷ್ಟಿ ಭಾರತೀಯ ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ದೇಶವನ್ನು ಬದಲಿಸಿದ ಭಾರತದ ಕಿರಿಯ ಪ್ರಧಾನಿಗೆ ನಮ್ಮ ಹೃತ್ಪೂರ್ವಕ ನಮನಗಳು ಎಂದು ಕಾಂಗ್ರೆಸ್ ಹೇಳಿದೆ.