ನವದೆಹಲಿ: ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದ್ದು, ತನಿಖಾ ಸಂಸ್ಥೆಗಳು ನನಗೆ ಕಳಿಸುವ ಸಮನ್ಸ್ ಸಂಖ್ಯೆಯ ಶಾಲೆಗಳನ್ನು ದೆಹಲಿಯಲ್ಲಿ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ನೀಡಿದ ಐದು ಸಮನ್ಸ್ಗಳನ್ನು ನಿರ್ಲಕ್ಷಿಸಿದ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಕುರಿತು ಇಡಿ ನೀಡಿದ ದೂರಿನ ಮೇರೆಗೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರ ತನ್ನ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂ ಬಿಡುತ್ತಿದೆ ಎಂದು ಆರೋಪಿಸಿರುವ ಅವರು, ಎಲ್ಲರಿಗೂ ಶಿಕ್ಷಣ ನೀಡುವ ಮೂಲಕ ಮುಂದಿನ ಒಂದು ಪೀಳಿಗೆಯೊಳಗೆ ಬಡತನ ನಿರ್ಮೂಲನೆಯಾಗಲಿದೆ ಹಾಗು ಈ ಗುರಿಯನ್ನು ಸಾಧಿಸಲು ದೆಹಲಿಯಲ್ಲಿ ಶಾಲೆಗಳನ್ನು ತೆರೆಯಲಾಗುತ್ತದೆ ಎಂದರು.
ದೆಹಲಿಯಲ್ಲಿ AAP ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಅನೇಕ ಶಾಲೆಗಳನ್ನು ತೆರೆಯಲಾಗಿದ್ದು, ಎಲ್ಲರಿಗೂ ಉಚಿತ ಹಾಗು ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಹಳೆ ಕಟ್ಟಡಗಳ ಬದಲಿಗೆ ಪ್ರಯೋಗಾಲಯ, ಗ್ರಂಥಾಲಯಗಳಂತಹ ಸೌಕರ್ಯಗಳನ್ನೊಳಗೊಂಡ ಹೊಸ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಮಯೂರ್ ವಿಹಾರ್ ೩ನೇ ಹಂತದಲ್ಲಿ ಸರ್ಕಾರಿ ಶಾಲಾ ಕಟ್ಟಡದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಹೇಳಿದರು.