ಹೊಸದಿಲ್ಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಗೋಯಲ್ ಅವರನ್ನು ರಾತ್ರಿ 10 ಗಂಟೆ ಸುಮಾರಿಗೆ ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಕೆನರಾ ಬ್ಯಾಂಕ್ನಲ್ಲಿ 538 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆ ನಡೆಸಿದ ನಂತರ ನರೇಶ್ ಅವರನ್ನು ಬಂಧಿಸಲಾಗಿದ್ದು ಶನಿವಾರ ಮುಂಬೈನ ಪಿಎಂಎಲ್ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಮೇ ನಲ್ಲಿ ಇಡಿ ಪ್ರಕರಣ ಆಧರಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ)ಎಫ್ಐಆರ್ ದಾಖಲಿಸಿತ್ತು. ಮೇ 5 ರಂದು ಸಿಬಿಐ ಅಧಿಕಾರಿಗಳು ಗೋಯಲ್ ಅವರ ನಿವಾಸ ಮತ್ತು ಕಚೇರಿ ಸೇರಿದಂತೆ ಮುಂಬೈನ ಏಳು ಸ್ಥಳಗಳಲ್ಲಿ ಶೋಧ ನಡೆಸಿದ್ದರು.
ಕಳೆದ ವರ್ಷ ನವೆಂಬರ್ 11 ರಂದು ಸಲ್ಲಿಸಲಾದ ಲಿಖಿತ ದೂರಿನಲ್ಲಿ ಜೆಟ್ ಏರ್ವೇಸ್ ಸಂಸ್ಥಾಪಕರ ಮೇಲೆ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ ಮತ್ತು ಕ್ರಿಮಿನಲ್ ದುಷ್ಕೃತ್ಯದ ಆರೋಪವನ್ನು ಸಿಬಿಐ ಹೊರಿಸಿದೆ.
ಕೆನರಾ ಬ್ಯಾಂಕ್ನ ಮುಖ್ಯ ಮಹಾಪ್ರಬಂಧಕ ಪಿ.ಸಂತೋಷ್ ಅವರು ಸಹಿ ಮಾಡಿರುವ ದೂರಿನಲ್ಲಿ ಅನಿತಾ ನರೇಶ್ ಗೋಯಲ್, ಗೌರಂಗ್ ಆನಂದ ಶೆಟ್ಟಿ ಇತರರು ಕೆನರಾ ಬ್ಯಾಂಕ್ ಗೆ 538.62 ಕೋಟಿ ರೂ. ವಂಚಿಸಿದ್ದಾರೆ ಎಂದು ದೂರಲಾಗಿತ್ತು. ಏಪ್ರಿಲ್ 2019 ರಲ್ಲಿ, ಜೆಟ್ ಏರ್ವೇಸ್ ತೀವ್ರ ಹಣ ಕೊರತೆ ಮತ್ತು ಹೆಚ್ಚುತ್ತಿರುವ ಸಾಲದ ಕಾರಣ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.