ನವದೆಹಲಿ: ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಮೊದಲ ದಿನ ಪೂರ್ಣಗೊಂಡಿದ್ದು ಇದೀಗ ಕೇಂದ್ರ ಸಚಿವ ಸಂಪುಟದ ಪ್ರಮುಖ ಸಭೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಅಜೆಂಡಾ ಇನ್ನೂ ತಿಳಿದಿಲ್ಲವಾದರೂ, ಈ ವಿಶೇಷ ಅಧಿವೇಶನದಲ್ಲಿ “ಐತಿಹಾಸಿಕ ನಿರ್ಧಾರಗಳನ್ನು” ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಈ ಹಿಂದಿನ ಹೇಳಿಕೆಯಿಂದ ಕ್ಯಾಬಿನೆಟ್ ಸಭೆ ಪ್ರಾಮುಖ್ಯತೆ ಪಡೆದಿದೆ.
ಮಹಿಳೆಯರಿಗೆ ಅಥವಾ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ, “ಒಂದು ರಾಷ್ಟ್ರ ಒಂದು ಚುನಾವಣೆ” ಮತ್ತು ದೇಶದ ಹೆಸರು ಬದಲಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಮೊದಲಿಗೆ ಭೇಟಿಯಾಗಿ ಸಭೆ ನಡೆಸಿದರು.
ಸಭೆಯಲ್ಲಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಕೂಡ ಉಪಸ್ಥಿತರಿದ್ದರು. ಗೋಯಲ್ ಮತ್ತು ಜೋಶಿ ಅವರು ಈಗ ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ. ವಿಶೇಷ ಅಧಿವೇಶನದಲ್ಲಿ ಚರ್ಚೆಗೆ ಬರಲಿರುವ ಎಂಟು ವಿಧೇಯಕಗಳ ಪಟ್ಟಿಯನ್ನು ಸರ್ಕಾರ ಭಾನುವಾರ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಗಳಿಗೆ ನೀಡಿದೆ. ಈ ಹಿಂದೆ ಅಜೆಂಡಾದ ಭಾಗವೆಂದು ನಂಬಲಾಗಿದ್ದ ಚುನಾವಣಾ ಅಧಿಕಾರಿಗಳ ನೇಮಕಾತಿಯ ವಿವಾದಾತ್ಮಕ ಮಸೂದೆಯನ್ನು ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಕೈಬಿಡಲಾಗಿದೆ.