ನವದೆಹಲಿ: ಹಿಂದೂಗಳು ಹಲಾಲ್ ಮಾಂಸ ತಿನ್ನುವುದನ್ನು ಬಿಡಬೇಕು ಎಂದು ಕೇಂದ್ರ ಸಚಿವ ಮತ್ತು ಬಿಜೆಪಿಯ ಗಿರಿರಾಜ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಬಿಹಾರದ ಬೇಗುಸರಾಯ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಟ್ಕಾ ಮಾಂಸ ವಿಧಾನದಲ್ಲಿ ಪ್ರಾಣಿಯನ್ನು ಒಂದೇ ಹೊಡೆತದಲ್ಲಿ ಕೊಲ್ಲಲಾಗುತ್ತದೆ. ಇನ್ನು ಮುಂದೆ ಹಲಾಲ್ ಮಾಂಸವನ್ನು ತಿನ್ನುವ ಮೂಲಕ ನಮ್ಮ ಧರ್ಮವನ್ನು ಭ್ರಷ್ಟಗೊಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.
ಹಿಂದೂಗಳು ಪ್ರಾಣಿಗಳನ್ನು ಬಲಿ ಕೊಟ್ಟಾಗಲೆಲ್ಲ ಒಂದೇ ಏಟಿಗೆ ಬಲಿ ಕೊಡುತ್ತಾರೆ. ಆದ್ದರಿಂದ ಅವರು ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮನ್ನು ತಾವು ಭ್ರಷ್ಟಗೊಳಿಸಬಾರದು. ಅವರು ಯಾವಾಗಲೂ ಜಟ್ಕಾ ಮಾಂಸವನ್ನು ಮಾತ್ರ ತಿನ್ನಬೇಕು. ಜಟ್ಕಾ ಮೂಲಕ ಪ್ರಾಣಿಗಳನ್ನು ವಧೆ ಮಾಡುವ ಕಸಾಯಿಖಾನೆಗಳನ್ನು ಸ್ಥಾಪಿಸುವ ಅಗತ್ಯವಿದೆ. ಜಟ್ಕಾ ಮಾಂಸವನ್ನು ಮಾತ್ರ ಮಾರಾಟ ಮಾಡುವ ಅಂಗಡಿಗಳು ಇರಬೇಕು ಎಂದು ಗಿರಿರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಮರ ಬಗ್ಗೆ ತೀಕ್ಷ್ಣವಾದ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿರುವ ಗಿರಿರಾಜ್ ಈ ಬಾರಿ ಅವರನ್ನು ಹೊಗಳಿದ್ದಾರೆ. ಹಲಾಲ್ ಮಾಂಸವನ್ನು ಮಾತ್ರ ತಿನ್ನುತ್ತೇವೆ ಎಂದು ನಿರ್ಧರಿಸಿದ ಎಲ್ಲ ಮುಸ್ಲಿಮರನ್ನು ನಾನು ಪ್ರಶಂಸಿಸುತ್ತೇನೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಈಗ ಹಿಂದೂಗಳು ತಮ್ಮ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಇದೇ ರೀತಿಯ ಬದ್ಧತೆಯನ್ನು ತೋರಿಸಬೇಕು. ಮುಸ್ಲಿಂ ಸಮುದಾಯದಲ್ಲಿ ಜಟ್ಕಾ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿದೆ. ಈ ಕಾರಣಕ್ಕಾಗಿ ಅವರು ಹಲಾಲ್ ಮಾಂಸವನ್ನು ಮಾತ್ರ ಸೇವಿಸುತ್ತಾರೆ ಎಂದು ಸಿಂಗ್ ಹೇಳಿದ್ದಾರೆ.