ನವದೆಹಲಿ: ಕೇಂದ್ರ ಸರ್ಕಾರದ ‘ವಿಕಸಿತ್ ಭಾರತ್’ ಪ್ರಚಾರಕ್ಕೆ ಜನರ ಮೊಬೈಲ್ಗೆ ಬರುತ್ತಿರುವ ವಾಟ್ಸ್ಆ್ಯಪ್ ಸಂದೇಶವನ್ನು ತಕ್ಷಣ ನಿಲ್ಲುವಂತೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ.
‘ವಿಕಸಿತ್ ಭಾರತ್ ಸಂಪರ್ಕ್’ ಅಭಿಯಾನದ ಅಡಿಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ನಡೆದಿದೆ.
ಅಧಿಕೃತ ವಾಟ್ಸ್ಆ್ಯಪ್ ಖಾತೆ ಮೂಲಕ ಕಳೆದ 10 ವರ್ಷಗಳಲ್ಲಿ ದೇಶದ 80 ಕೋಟಿಗೂ ಅಧಿಕ ನಾಗರಿಕರು ವಿವಿಧ ಯೋಜನೆಗಳ ನೇರ ಲಾಭ ಪಡೆದಿದ್ದಾರೆ. ಭಾರತ ಸರ್ಕಾರ ಭವಿಷ್ಯದಲ್ಲಿ ದೇಶದ ನಾಗರಿಕರನ್ನು ಭೇಟಿಯಾಗೋದನ್ನು ಮುಂದುವರಿಸುತ್ತದೆ. ಅಭಿವೃದ್ಧಿ ಹೊಂದಿದ ಭಾರತ ಆಗಲು, ನಿಮ್ಮ ಸಲಹೆ ಸೂಚನೆಗಳು ನಮಗೆ ಮುಖ್ಯ. ಹೀಗಾಗಿ ನಿಮ್ಮ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ ಎಂದು ಅಭಿಪ್ರಾಯವನ್ನು ಕೇಳಲಾಗುತ್ತಿತ್ತು.
ಕೇಂದ್ರ ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ನೀತಿ ಸಂಹಿತೆ ಜಾರಿಯಾದ ನಂತರವೂ ವಿಕಸಿತ ಭಾರತಕ್ಕೆ ಸಂಬಂಧಿಸಿದ ಸಂದೇಶಗಳನ್ನು ಜನರು ಸ್ವೀಕರಿಸುತ್ತಿದ್ದರೆ, ಅವುಗಳನ್ನು ತಕ್ಷಣವೇ ನಿಲ್ಲಿಸಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ ಎಂದು ತಿಳಿಸಿದೆ.