ಹೊಸದಿಲ್ಲಿ, ನ.23: ಸ್ಥಿರ ಕೆಲಸವಿಲ್ಲ ಎಂಬ ಕಾರಣಕ್ಕೆ ತೀವ್ರ ವಾಗ್ವಾದದಿಂದ ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಹತ್ಯೆಗೈದ ಘಟನೆ ದೆಹಲಿಯ ಪಾಲಂ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೃತರನ್ನು ವ್ಯಕ್ತಿಯ ಅಜ್ಜಿ ದೀವಾನಾ ದೇವಿ, ಆತನ ತಂದೆ ದಿನೇಶ್, ತಾಯಿ ದರ್ಶನಾ ಮತ್ತು 18 ವರ್ಷದ ಸಹೋದರಿ ಊರ್ವಶಿ ಎಂದು ಗುರುತಿಸಲಾಗಿದೆ. 25 ವರ್ಷದ ಆರೋಪಿ ಕೇಶವ್ ಮಾದಕ ವ್ಯಸನಿ ಎಂದು ಹೇಳಲಾಗಿದ್ದು, ಇತ್ತೀಚೆಗೆ ಪುನರ್ವಸತಿ ಕೇಂದ್ರದಿಂದ ಹೊರಬಂದಿದ್ದ.
ಮಂಗಳವಾರ ರಾತ್ರಿ ಸುಮಾರು 10.30 ರ ಸುಮಾರಿಗೆ ಪಾಲಂ ಪೊಲೀಸ್ ಠಾಣೆಗೆ ಕರೆ ಬಂದಿದ್ದು, ಮನೆಯೊಂದರಲ್ಲಿ ಗದ್ದಲದ ಬಗ್ಗೆ ಕರೆ ಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ತಿಳಿಸಿದ್ದಾರೆ.
“ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ, ಮನೆಯಲ್ಲಿ ನಾಲ್ಕು ಕುಟುಂಬ ಸದಸ್ಯರು ಸಾವನಪ್ಪಿದ್ದರು. ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಆರೋಪಿಯನ್ನು ಅವನ ಸಂಬಂಧಿಕರು ಹಿಡಿದರು” ಎಂದು ಡಿಸಿಪಿ ಹೇಳಿದರು. ಐಪಿಸಿ ಸೆಕ್ಷನ್ ೩೦೨ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.
“ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗೆ ಸ್ಥಿರವಾದ ಕೆಲಸವಿಲ್ಲದ ಕಾರಣ ಕುಟುಂಬ ಸದಸ್ಯರೊಂದಿಗೆ ಜಗಳವಾಡುವುದು ಅಪರಾಧದ ಉದ್ದೇಶವೆಂದು ತೋರುತ್ತದೆ” ಎಂದು ಅಧಿಕಾರಿ ಹೇಳಿದರು.