ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತಂತೆ ಕಾಂಗ್ರೆಸ್ ಬಿಡುಗಡೆಗೊಳಿಸಿದ ಕಪ್ಪು ಪತ್ರವನ್ನು ‘ದೃಷ್ಟಿ ಬೊಟ್ಟು’ಎಂದು ಛೇಡಿಸಿರುವ ಪ್ರಧಾನಿ ಮೋದಿ, ಅದು ನಮ್ಮ ಸರ್ಕಾರದ ಸಾಧನೆಗಳ ಮೇಲೆ ನೆಟ್ಟಿರುವ ಕೆಟ್ಟ ದೃಷ್ಟಿಯನ್ನು ನಿವಾರಿಸುತ್ತದೆ ಎಂದು ಹೇಳಿದ್ದಾರೆ.
ಯಾವುದೇ ಒಳ್ಳೆಯ ಕೆಲಸವಾದರೂ ನಾವು ಕಪ್ಪು ಬೊಟ್ಟನ್ನಿಟ್ಟು ದೃಷ್ಟಿ ತೆಗೆಯುತ್ತೇವೆ. ಇಂದು ಈ ಗೌರವ ಸಮರ್ಪಿಸಿದ ಮಲ್ಲಿಕಾರ್ಜುನ ಖರ್ಗೆಜೀ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಕೇಂದ್ರದ ವೈಫಲ್ಯಗಳನ್ನು ಎತ್ತಿ ತೋರಿಸಲು ಕಾಂಗ್ರೆಸ್ ಇಂದು ಕಪ್ಪು ಪತ್ರವನ್ನು ಬಿಡುಗಡೆ ಮಾಡಿತ್ತು. ಮೋದಿ ಆಡಳಿತದ ಕಳೆದ 10 ವರ್ಷಗಳು ಬೆಲೆ ಏರಿಕೆ, ನಿರುದ್ಯೋಗ, ಪ್ರಮುಖ ಸಂಸ್ಥೆಗಳ ಬುಡಮೇಲು ಮತ್ತು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ತಾರತಮ್ಯ ಸೇರಿ ಅನ್ಯಾಯದ ವರ್ಷಗಳಾಗಿದ್ದವು ಎಂದು ಕಾಂಗ್ರೆಸ್ ದೂಷಿಸಿತ್ತು.
ಕಳೆದ 10 ವರ್ಷಗಳಲ್ಲಿ ದೇಶವು ಅಭಿವೃದ್ಧಿಯ ಹೊಸ ಎತ್ತರಕ್ಕೆ ತಲುಪಿದ್ದು, ಅದರ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ನಿವಾರಣೆಗೆ ನಾವು ಇದನ್ನು(ಕಪ್ಪು ಪತ್ರ) ದೃಷ್ಟಿ ಬೊಟ್ಟೆಂದು ಸ್ವೀಕರಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.