ನವದೆಹಲಿ: ಕೆನಡಾದಲ್ಲಿ ಉಗ್ರಗಾಮಿ ಶಕ್ತಿಗಳು ಭಾರತ ವಿರೋಧಿ ಚಟುವಟಿಕೆಗಳನ್ನು ಮುಂದುವರೆಸುತ್ತಿರುವ ಬಗ್ಗೆ ಭಾರತದ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಜಿ. 20 ಸಮಾವೇಶದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಕೆನಾಡದಲ್ಲಿ ಪ್ರತ್ಯೇಕತಾವಾದ, ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರ, ಭಾರತೀಯ ರಾಜತಾಂತ್ರಿಕ ಆವರಣ ಮೇಲೆ ಹಾನಿ ಎಸಗುವ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೆನಡಾದಲ್ಲಿರುವ ಭಾರತೀಯ ಸಮುದಾಯ ಮತ್ತು ಅವರ ಪೂಜಾ ಸ್ಥಳಗಳಿಗೆ ಹಾನಿಯುಂಟು ಮಾಡುವ ಪ್ರಕರಣಗಳ ಕುರಿತು ಮಾತುಕತೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಪ್ರಕಟಣೆ ತಿಳಿಸಿದೆ.
ಸಂಘಟಿತ ಅಪರಾಧ, ಡ್ರಗ್ ಸಿಂಡಿಕೇಟ್ಗಳು ಮತ್ತು ಮಾನವ ಕಳ್ಳಸಾಗಣೆ ಬೆದರಿಕೆಗಳನ್ನು ಎದುರಿಸಲು ಉಭಯ ದೇಶಗಳು ಸಹಕರಿಸುವುದು ಅತ್ಯಗತ್ಯ ಎಂದು ಪ್ರಧಾನಿ ತಿಳಿಸಿದರು. ಭಾರತ-ಕೆನಡಾ ಬಾಂಧವ್ಯದ ಪ್ರಗತಿಗೆ ಪರಸ್ಪರ ಗೌರವ ಮತ್ತು ನಂಬಿಕೆಯ ಆಧಾರದ ಮೇಲೆ ಸಂಬಂಧ ಸುಧಾರಣೆ ಅತ್ಯಗತ್ಯ ಎಂದು ಮೋದಿ ಉಲ್ಲೇಖಿಸಿದ್ದಾರೆ.
ಕೆನಡಾದಲ್ಲಿ ಖಾಲಿಸ್ತಾನಿ ಬೆಂಬಲಿಗರು ದೇವಸ್ಥಾನಗಳ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿದೆ. ಬ್ರಿಟಿಷ್ ಕೊಲಂಬಿಯಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದ ಗೋಡೆಗಳು ಮತ್ತು ದ್ವಾರದ ಮೇಲೆ “ಖಾಲಿಸ್ತಾನ್ ಪರ” ಪೋಸ್ಟರ್ ಹಾಕಿದ್ದ ಘಟನೆ ಕೆಲಸಮಯದ ಹಿಂದೆ ನಡೆದಿದ್ದು, ಜೂನ್ 18 ರಂದು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಪಾತ್ರದ ಬಗ್ಗೆ ಕೆನಡಾ ತನಿಖೆ ಮಾಡಬೇಕೆಂದು ಪೋಸ್ಟರ್ಗಳನ್ನು ಅಂಟಿಸಲಾಗಿತ್ತು.
ಖಲಿಸ್ತಾನ್ ಟೈಗರ್ ಫೋರ್ಸ್ ಮತ್ತು ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಕೆನಡಾದ ಮುಖ್ಯಸ್ಥನಾಗಿದ್ದ ನಿಯೋಜಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಈ ವರ್ಷದ ಜೂನ್ನಲ್ಲಿ ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು.