ನವದೆಹಲಿ: ಭಾರತ ಸರ್ಕಾರದಿಂದ ಬೆಂಬಲದ ಕೊರತೆ, ಸಿಬ್ಬಂದಿ ಮತ್ತು ಸಂಪನ್ಮೂಲಗಳ ಕೊರತೆಯನ್ನು ಉಲ್ಲೇಖಿಸಿ ಭಾರತದಲ್ಲಿನ ತನ್ನ ರಾಯಭಾರ ಕಚೇರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಅಫ್ಘಾನಿಸ್ತಾನ ಘೋಷಿಸಿದೆ. ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ದೀರ್ಘಕಾಲದ ಬಾಂಧವ್ಯ ಮತ್ತು ಸ್ನೇಹವನ್ನು ಎಚ್ಚರಿಕೆಯಿಂದ ಯೋಚಿಸಿದ ನಂತರ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಅಫ್ಘಾನಿಸ್ತಾನ ರಾಯಭಾರ ಕಚೇರಿ ತಿಳಿಸಿದೆ.
“ನವ ದೆಹಲಿಯಲ್ಲಿರುವ ಅಫ್ಘಾನಿಸ್ತಾನದ ರಾಯಭಾರ ಕಚೇರಿ ಕಾರ್ಯಾಚರಣೆಯನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸುವುದು ದುಃಖ, ವಿಷಾದ ಮತ್ತು ನಿರಾಶೆಯಾಗಿದೆ” ಎಂದು ಹೇಳಿದೆ.
ನವದೆಹಲಿಯಲ್ಲಿನ ಅಫ್ಘಾನ್ ರಾಯಭಾರ ಕಚೇರಿಯ ನೇತೃತ್ವವನ್ನು ರಾಯಭಾರಿ ಫರೀದ್ ಮಮುಂಡ್ಜಾಯ್ ವಹಿಸಿದ್ದರು, ಅವರನ್ನು ಅಶ್ರಫ್ ಘನಿ ಸರ್ಕಾರದಿಂದ ನೇಮಿಸಲಾಗಿತ್ತು. ಆಗಸ್ಟ್ 2021 ರಲ್ಲಿ ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿದ್ದರೂ ಅವರು ಅಧಿಕಾರದಲ್ಲಿ ಮುಂದುವರಿದಿದ್ದರು.
ರಾಯಭಾರ ಕಚೇರಿ ಮುಚ್ಚಲು ಕೆಲ “ಅಂಶಗಳನ್ನು” ಅಫ್ಗನ್ ಪಟ್ಟಿ ಮಾಡಿದೆ. ಭಾರತ ಸರ್ಕಾರದಿಂದ ಅಗತ್ಯ ಬೆಂಬಲ ದೊರೆಯುತ್ತಿಲ್ಲ ಎಂದ ಹೇಳಿದೆ. ಇದರಿಂದ ರಾಯಭಾರ ಕಚೇರಿಯು ತನ್ನ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ಅಫ್ಗನ್ ರಾಯಭಾರ ಕಚೇರಿಯ ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಕಾರ್ಯಾಚರಣೆಯನ್ನು ಮುಂದುವರಿಸಲು ಕಷ್ಟವಾಗುತ್ತಿದೆ. ಅಲ್ಲದೆ ರಾಜತಾಂತ್ರಿಕರಿಗೆ ವೀಸಾ ನವೀಕರಣಕ್ಕೆ ಬೆಂಬಲದ ಕೊರತೆಯು ಸಮಸ್ಯೆ ತಂದೊಡ್ಡಿತು ಎಂದು ಅಫ್ಗನ್ ಸರ್ಕಾರ ಹೇಳಿದೆ.