ನವದೆಹಲಿ: ಫೆಬ್ರವರಿ 14 ದೇಶವಾಸಿಗಳಿಗೆ ಅತೀವ ದುಃಖಕರ ದಿನ. 14 ಫೆಬ್ರವರಿ 2019ರಂದು ಪುಲ್ವಾಮದಲ್ಲಿ ಭಾರತೀಯ ಸೇನಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ವೀರಮರಣ ಹೊಂದಿದ್ದು, ಭಾರತೀಯರು ಎಂದು ಮರೆಯಲಾರದ ಘಟನೆಯಾಯಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಲವತ್ತು ಸಿಆರ್ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಎರಡು ಬಸ್ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ದಕ್ಷಿಣ ಕಾಶ್ಮೀರದ ಪುಲ್ವಾಮಾ ಹೆದ್ದಾರಿಯಲ್ಲಿ ಹೋಗುತ್ತಿದ್ದ ಅರೆಸೇನಾಪಡೆಯ ವಾಹನಗಳ ಕಾನ್ವಯ್ ಮೇಲೆ ದಾಳಿ ನಡೆದಿತ್ತು. ದಾಳಿಯ ಸ್ವಲ್ಪ ಸಮಯದ ನಂತರ ಜೈಶ್ ಇ ಮೊಹಮ್ಮದ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿತ್ತು.
ಬಾಲಾಕೋಟ್ ದಾಳಿ: ಸೈನಿಕರ ಸಾವಿನ ನಂತರ ಉಗ್ರರ ಮಹಾನ್ ಪೋಷಕ ಪಾಕಿಸ್ತಾನವನ್ನು ವಿವಿಧ ರಾಜತಾಂತ್ರಿಕ ಮಾರ್ಗಗಳ ಮೂಲಕ ಕಟ್ಟಿಹಾಕುವ ಸಮರ್ಥ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ನ ಕುತಂತ್ರ ಬುದ್ಧಿ ಬಯಲಿಗೆ ಬರುವಂತಾಯಿತು. ಅಲ್ಲದೇ ಈ ವಿಚಾರದಲ್ಲಿ ಚೀನಾ ಹೊರತುಪಡಿಸಿ ಪಾಕ್ ಏಕಾಂಗಿಯಾಯಿತು.
ಬಳಿಕ ಫೆ.26 2019ರಂದು ವಾಯುಪಡೆಯ ಜೆಟ್ಗಳು ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಉಗ್ರರ ಬೃಹತ್ ಶಿಬಿರವೊಂದು ಸಂಪೂರ್ಣ ನಾಶವಾಯಿತು. ಅಲ್ಲದೆ ವೀರಯೋಧರ ಮರಣಕ್ಕೆ ಪ್ರತೀಕಾರ ಪಡೆದಂತಾಯಿತು.