ನವದೆಹಲಿ: ಹಿಜಾಬ್ ವಿವಾದದಿಂದ ಮುಗ್ಧ ವಿದ್ಯಾರ್ಥಿಗಳ ಮಧ್ಯೆ ವಿಷದ ಗೋಡೆ ನಿರ್ಮಾಣ ಮಾಡಲಾಗುತ್ತಿದೆ,ಕರ್ನಾಟಕದ ವಿವಾದ ತಮಿಳುನಾಡಿಗೆ ಬರುವುದು ಬೇಡ ಎಂದು ನಟ ಹಾಗೂ ಮಕ್ಕಳ ನಿಧಿ ಮಯಂ (ಎಂಎನ್ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ಬುಧವಾರ ಹೇಳಿದ್ದಾರೆ.
ವಿದ್ಯಾರ್ಥಿಗಳ ಮಧ್ಯೆ ಧಾರ್ಮಿಕ ವಿಷದ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಗತಿಪರ ಶಕ್ತಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ಹಿಜಾಬ್ ವಿವಾದ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಹಿಜಾಬ್ ವಿವಾದ ಅಶಾಂತಿ ಹುಟ್ಟುಹಾಕುತ್ತಿದೆ.
ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ಸಂಘರ್ಷ ಹಿಂಸಾಚಾರಕ್ಕೆ ತಿರುಗಿದ್ದು, ಮಂಗಳವಾರ ರಾಜ್ಯದ 18 ಜಿಲ್ಲೆಗಳ 54ಕ್ಕೂ ಹೆಚ್ಚು ಕಾಲೇಜುಗಳಲ್ಲಿ ವಿವಾದ ಭುಗಿಲೆದ್ದಿದ್ದು. ಈ ಪೈಕಿ 4 ಜಿಲ್ಲೆಗಳ 6 ಕಾಲೇಜುಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ವಿದ್ಯಾರ್ಥಿಗಳ ಗುಂಪು ಘರ್ಷಣೆ, ಕಲ್ಲು ತೂರಾಟ ನಡೆಸಿದ್ದರು.