ಸ್ವಾತಂತ್ರ್ಯ ಹೋರಾಟಗಾರರ ಬಹುವರ್ಷದ ತ್ಯಾಗ ಮತ್ತು ಶ್ರಮದ ಫಲವೇ ಸಂವಿಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಇಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ 71ನೇ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆ, ವೈವಿಧ್ಯತೆಯ ದೇಶವಾದ ಭಾರತದ ಸೊಬಗನ್ನು ನಮ್ಮ ಸಂವಿಧಾನ ವಿವರಿಸುತ್ತದೆ ಎಂದರು.
ಅದೆಷ್ಟೋ ಅಡೆತಡೆಗಳನ್ನು ಎದುರಿಸಿ ಸಂವಿಧಾನವನ್ನು ರಚಿಸಿಲಾಗಿದೆ. ದೇಶಕ್ಕೆ ಸಂವಿಧಾನವನ್ನು ನೀಡಲು ಹಲವು ನಾಯಕರು ಶ್ರಮಿಸಿದ್ದಾರೆ, ಅವರಿಗೆ ಇಂದು ಗೌರವ ಸಲ್ಲಿಸುವ ದಿನ ಇದಾಗಿದೆ. ಸಂವಿಧಾನದ ಮೂಲಕ ದೇಶದಲ್ಲಿನ ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನಮ್ಮ ದೇಶದಲ್ಲಿ ಕೆಲವು ರಾಜಕೀಯ ಪಕ್ಷಗಳು ಕುಟುಂಬದ ಒಳಿತಿಗಾಗಿ, ಕುಟುಂಬದಿಂದಲೇ ನಡೆಯುತ್ತಿರುವ ಪಕ್ಷಗಳಾಗಿವೆ. ವಂಶ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಒಳಿತಲ್ಲ. ಸಂವಿಧಾನ ದಿನವನ್ನು ಯಾವುದೋ ರಾಜಕೀಯ ಪಕ್ಷ ಆಯೋಜಿಸಿದ್ದಲ್ಲ ಎಂದರು.
2008ರ ಮುಂಬೈ ಉಗ್ರರ ದಾಳಿಗೆ ಇಂದು 13 ವರ್ಷ. ” ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರನ್ನು ಮೋದಿ ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮಾತನಾಡಿದ್ದು, ” ಸಂವಿಧಾನ ಪೀಠಿಕೆಯು ಸಂವಿಧಾನದ ತತ್ವಶಾಸ್ತ್ರವನ್ನು ಸಾರಾಂಶಗೊಳಿಸುತ್ತದೆ. ಜನರು ನಮ್ಮ ದೇಶವನ್ನು ಪ್ರಜಾಪ್ರಭುತ್ವ ಗಣರಾಜ್ಯವಾಗಲು ಆದ್ಯತೆ ನೀಡುತ್ತಾರೆ ಮತ್ತು ನಮ್ಮ ಅಭಿವೃದ್ಧಿಯ ಕೇಂದ್ರದಲ್ಲಿ ಇದ್ದಾರೆ ಎಂಬುದು ನಮ್ಮ ದೃಢವಾದ ನಂಬಿಕೆ ಎಂದು ಹೇಳಿದರು.
“ನಮ್ಮ ಸಂವಿಧಾನವು ನಮಗೆ ಭಗವದ್ಗೀತೆಯ ಆಧುನಿಕ ಆವೃತ್ತಿಯಂತಿದೆ. ಇದು ರಾಷ್ಟ್ರಕ್ಕಾಗಿ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ. ಪ್ರತಿಯೊಬ್ಬರೂ ದೇಶಕ್ಕಾಗಿ ಕೆಲಸ ಮಾಡಲು ಬದ್ಧರಾಗಿದ್ದರೆ ‘ಏಕ ಭಾರತ, ಶ್ರೇಷ್ಠ ಭಾರತ’ವನ್ನು ನಿರ್ಮಿಸಬಹುದು ಎಂದು ಸಂಸತ್ನಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದರು.