ಹೊಸದಿಲ್ಲಿ: ತ್ರಿಪುರಾದಲ್ಲಿ ಡಾರ್ಲಾಂಗ್ ಸಮುದಾಯವನ್ನು ಎಸ್ಟಿಗಳ ಪಟ್ಟಿಗೆ ಸೇರಿಸಲು ಸಂವಿಧಾನ (ಪರಿಶಿಷ್ಟ ಬುಡಕಟ್ಟುಗಳು) ಆದೇಶ (ತಿದ್ದುಪಡಿ) ಮಸೂದೆ, 2022 ಅನ್ನು ಲೋಕಸಭೆ ಅಂಗೀಕರಿಸಿದೆ.
ತ್ರಿಪುರಾ ರಾಜ್ಯಕ್ಕೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವುದಕ್ಕಾಗಿ 1950 ರ ಸಂವಿಧಾನ (ಪರಿಶಿಷ್ಟ ಬುಡಕಟ್ಟುಗಳು) ಆದೇಶವನ್ನು ತಿದ್ದುಪಡಿ ಮಾಡಲು ಮಸೂದೆಯು ಪ್ರಯತ್ನಿಸುತ್ತದೆ. ಮಸೂದೆಯು ‘ಡಾರ್ಲಾಂಗ್’ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ‘ಕುಕಿ’ ಉಪ-ಪಂಗಡವಾಗಿ ಪ್ರಸ್ತಾಪಿಸುತ್ತದೆ.
ಸದನದಲ್ಲಿ ಮಸೂದೆಯನ್ನು ಮಂಡಿಸಿದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಬುಡಕಟ್ಟು ಪ್ರದೇಶಗಳ ಅಭಿವೃದ್ಧಿ ಮತ್ತು ಬುಡಕಟ್ಟು ಸಮುದಾಯದ ಕಲ್ಯಾಣಕ್ಕೆ ನರೇಂದ್ರ ಮೋದಿ ಸರಕಾರ ಬದ್ಧವಾಗಿದೆ ಎಂದು ಹೇಳಿದರು. ಗುಡ್ಡಗಾಡು ಪ್ರದೇಶದಲ್ಲಿ ಒಂದೇ ಸಮುದಾಯದ ಜನರು ವಿವಿಧ ಉಪ ಪಂಗಡಗಳಾಗಿ ನೆಲೆಸಿದ್ದು, ದೀರ್ಘಕಾಲದಿಂದ ಪಟ್ಟಿಯಿಂದ ಹೊರಗುಳಿದಿರುವುದರಿಂದ ತಿದ್ದುಪಡಿ ತರಲಾಗಿದೆ ಎಂದರು.
ಬುಡಕಟ್ಟು ಜನಸಂಖ್ಯೆ ಮತ್ತು ಬುಡಕಟ್ಟು ಪ್ರದೇಶಗಳ ಕಲ್ಯಾಣ ಹಾಗೂ ಅಭಿವೃದ್ಧಿಯನ್ನು ಖಾತ್ರಿಪಡಿಸದೆ, ರಾಷ್ಟ್ರದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ 2014-15ರಲ್ಲಿ ಕೇವಲ ₹ 16, 111 ಕೋಟಿಗಳಷ್ಟಿದ್ದರೆ, 2021-22ರಲ್ಲಿ ₹ 87,585 ಕೋಟಿಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು. ಎಸ್ಟಿ ಘಟಕದ ಅಡಿಯಲ್ಲಿ ಎಲ್ಲಾ ಗ್ರಾಮಗಳಿಗೆ ಬ್ರಾಡ್ಬ್ಯಾಂಡ್ ಮತ್ತು 4G ಸಂಪರ್ಕವನ್ನು ಸಕ್ರಿಯಗೊಳಿಸಲು ಐಟಿ ಸಚಿವಾಲಯವು ಸುಮಾರು ₹ 7,000 ಕೋಟಿಗಳ ವೆಚ್ಚದ ಯೋಜನೆಯನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಬುಡಕಟ್ಟು ಪ್ರದೇಶದ ಶೈಕ್ಷಣಿಕ ಸೌಲಭ್ಯಗಳ ಕುರಿತು ಮಾತನಾಡಿದ ಸಚಿವರು, ಈ ಹಿಂದೆ 2014ರಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಕೇವಲ ₹ 278 ಕೋಟಿ ಇದ್ದ ಅನುದಾನವನ್ನು ಈಗ ₹ 1,418 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಸಚಿವ ಮುಂಡಾ ಹೇಳಿದರು.
ಕಾಂಗ್ರೆಸ್ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ತಾಪಿರ್ ಗಾವೋ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಏನೂ ಮಾಡಿಲ್ಲ. ನರೇಂದ್ರ ಮೋದಿ ಸರಕಾರ ಅದನ್ನು ಈಡೇರಿಸಲಿದೆ ಎಂದು ಹೇಳಿದರು. ತ್ರಿಪುರಾದಲ್ಲಿ ಒಟ್ಟು ಜನಸಂಖ್ಯೆಯ ಶೇ. 2.15ರಷ್ಟು ಮಾತ್ರ ಇರುವ ಡಾರ್ಲಾಂಗ್ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನದ ಮಾನ್ಯತೆ ನೀಡಿದ ಪ್ರಧಾನಿ ಮೋದಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಮುಂಡಾ ಅವರನ್ನು ಅವರು ಅಭಿನಂದಿಸಿದರು