ನವದೆಹಲಿ:“ರಷ್ಯಾ- ಉಕ್ರೇನ್ ಕಾಳಗದಲ್ಲಿ ಭಾರತ ಒಂದು ಪಕ್ಷದ ಪರ ನಿಂತಿದೆ ಎಂದು ವಾದಿಸುವುದಿದ್ದರೆ, ನಾವು ಶಾಂತಿಯ ಪರ ನಿಂತಿದ್ದೇವೆ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ನಡೆದ ಚರ್ಚೆಗೆ ಉತ್ತರವಾಗಿ ಮಾತನಾಡಿದ ಅವರು, ಆ ದೇಶದಲ್ಲಿ ತಕ್ಷಣವೇ ಹಿಂಸಾಚಾರ ನಿಲ್ಲಬೇಕು ಮತ್ತು ಶಾಂತಿ ಸ್ಥಾಪನೆಯಾಗಬೇಕು.
ಅದು ಭಾರತ ಸರ್ಕಾರದ ನಿಲುವು ಎಂದು ಹೇಳಿದ್ದಾರೆ.
ಯುದ್ಧ ಪೀಡಿತ ಉಕ್ರೇನ್ನಿಂದ ಪ್ರಜೆಗಳನ್ನು ತೆರವುಗೊಳಿಸಿದ ಮೊದಲ ರಾಷ್ಟ್ರವೆಂದರೆ ಭಾರತ. ಸರ್ಕಾರದ ಈ ಕ್ರಮವೇ ಇತರ ರಾಷ್ಟ್ರಗಳಿಗೆ ಪ್ರೇರಣೆಯಾಯಿತು ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿ ಇದ್ದ ದೇಶದ ವಿದ್ಯಾರ್ಥಿಗಳನ್ನು ತೆರವುಗೊಳಿಸುವ “ಆಪರೇಷನ್ ಗಂಗಾ’ ಅತ್ಯಂತ ಸವಾಲಿನದ್ದಾಗಿತ್ತು. ಅದಕ್ಕಾಗಿಯೇ ಕೇಂದ್ರದ ನಾಲ್ವರು ಸಚಿವರು ಅಲ್ಲಿಗೆ ತೆರಳಿದ್ದರು. ಉಕ್ರೇನ್ನ ನೆರೆಯ ರಾಷ್ಟ್ರಗಳ ಸರ್ಕಾರಗಳು ಸಹಕರಿಸಿದ ಕಾರಣವೇ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.