ನವದೆಹಲಿ : ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯಕ್ಕಾಗಿ ಮಧ್ಯಾಹ್ನದ ಊಟದ ಯೋಜನೆಯಡಿಯಲ್ಲಿ ಸಾರವರ್ಧಿತ ಅಕ್ಕಿ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ದೇಶದಾದ್ಯಂತ ನಡೆಯುತ್ತಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಯೋಜನೆಯಡಿ ಮಕ್ಕಳಿಗೆ ಸಾಮಾನ್ಯ ಅಕ್ಕಿಯ ಬದಲು ಸಾರವರ್ಧಿತ ಅಕ್ಕಿ ನೀಡಲಾಗುವುದು. ಹೀಗಾಗಿ ಊಟಕ್ಕಾಗಿ ಬಳಕೆ ಮಾಡುವ ಅಕ್ಕಿಯ ಸಾಕಷ್ಟು ದಾಸ್ತಾನು ಇದ್ದ ನಂತರ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಸಾರವರ್ಧಿತ ಅಕ್ಕಿಯನ್ನು ಬಳಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ಅದರ ಬಳಕೆಯನ್ನು ತ್ವರಿತಗೊಳಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಖಾಸಗಿ ಮಾಧ್ಯಮವೊಂದರ ವರದಿ ಪ್ರಕಾರ ಕೇಂದ್ರ ಶಿಕ್ಷಣ ಸಚಿವಾಲಯವು ಅಕ್ಟೋಬರ್ 20 ರಂದು ಈ ವಿಷಯದ ಬಗ್ಗೆ ರಾಜ್ಯಗಳಿಗೆ ಪತ್ರ ಬರೆದಿದೆ. ಅದರ ಪತ್ರದಲ್ಲಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಭಾರತೀಯ ಆಹಾರ ನಿಗಮದ (ಎಫ್ಸಿಐ) ಗೋದಾಮುಗಳಿಂದ ವಿಶೇಷವಾಗಿ ಮಧ್ಯಾಹ್ನದ ಊಟಕ್ಕಾಗಿ ಸಾರವರ್ಧಿತ ಅಕ್ಕಿಯ ಸರಕುಗಳನ್ನು ತರುವಂತೆ ಹೇಳಿದೆ ಎನ್ನಲಾಗಿದೆ. ಫೋರ್ಟಿಫೈಡ್ ಅಕ್ಕಿ ದಾಸ್ತಾನು ಹೆಚ್ಚಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಂಟಿ ಕಾರ್ಯದರ್ಶಿ ಆರ್.ಸಿ.ಮೀನಾ ಅವರು ರಾಜ್ಯ ಶಿಕ್ಷಣ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರಂತೆ. ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2024 ರ ವೇಳೆಗೆ ಪಡಿತರ ಅಂಗಡಿಗಳಲ್ಲಿ ಮತ್ತು ಮಧ್ಯಾಹ್ನದ ಊಟದಲ್ಲಿ ಮತ್ತು ಶಿಶುಗಳು ಮತ್ತು ಹಾಲುಣಿಸುವ ತಾಯಂದಿರನ್ನು ಒಳಗೊಂಡಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿಯಲ್ಲಿ ಕೇವಲ ಬಲವರ್ಧಿತ ಅಕ್ಕಿಯನ್ನು ವಿತರಿಸಲಾಗುವುದು ಎಂದು ಘೋಷಿಸಿದ್ದರು.