ಬೆಂಗಳೂರು: ರಾಜ್ಯದ ಜೈಲುಗಳಲ್ಲಿರುವ ಕೈದಿಗಳಿಗೆ ನವೆಂಬರ್ 1 ರಿಂದ ಜೈಲಿನಲ್ಲೇ ಶಿಕ್ಷಣ ನೀಡುವ ಸಾಕ್ಷರತಾ ಕಾರ್ಯಕ್ರಮವನ್ನು ಆರಂಭಿಸುತ್ತೇವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ವಿವಿಧ ಜೈಲುಗಳಲ್ಲಿ ಹದಿನಾರು ಸಾವಿರ ಖೈದಿಗಳಿದ್ದು, ಈ ಪೈಕಿ ಅನಕ್ಷರಸ್ಥ ಕೈಜಿಗಳು ಎಷ್ಟು ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 6 ಸಾವಿರ ಮಂದಿ ಅನಕ್ಷರಸ್ಥ ಕೈದಿಗಳಿದ್ದಾರೆಂದು ತಿಳಿದುಬಂದಿದೆ.
ಇವರಿಗೆ ಶಿಕ್ಷಣ ನೀಡಲು ಪೊಲೀಸ್ ಇಲಾಖೆ ರೂಪುರೇಷೆ ಸಿದ್ಧಪಡಿಸಿದೆ. ಹೆಬ್ಬೆಟ್ಟು ಒತ್ತಿ ಜೈಲಿಗೆ ಬಂದವರನ್ನು ಸಹಿ ಹಾಕಿ ಹೊರಕಳಿಸಲಾಗುತ್ತದೆ. ಹೀಗಾಗಿ ಈ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಅಕ್ಷರ ಕಲಿಸಲು ಖೈದಿಗಳನ್ನೂ ಬಳಸಿಕೊಳ್ಳಲಾಗುತ್ತದೆ. ಅವರಿಗೆ ಗೌರವ ಧನ ಕೊಡಲಾಗುತ್ತದೆ ಎಂದು ಹೇಳಿದ್ದಾರೆ.
ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಕೈದಿಗಳು ಸೇರಿದಂತೆ 2-3 ತಿಂಗಳಿನಿಂದ ಹಿಡಿದು ಎಷ್ಟು ವರ್ಷದವರೆಗೆ ಜೈಲಿನಲ್ಲಿ ಇರುತ್ತಾರೋ ಅಷ್ಟೂ ವರ್ಷ ಕಲಿಕಾ ತರಗತಿಗಳು ನಡೆಯಲಿವೆ. ಕನಿಷ್ಟ ಎರಡು ತಿಂಗಳು ಜೈಲಿನಲ್ಲಿದ್ದರೂ ಕಲಿಕೆ ಬಗ್ಗೆ ಆಸಕ್ತಿ ಹುಟ್ಟಿಸಿ ಕಳುಹಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.