ನವದೆಹಲಿ: ಭೂಮಿ ದಿನವು ‘ಭೂಮಿ ತಾಯಿ’ಯ ಕರುಣೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ಈ ಗ್ರಹದ ಕಾಳಜಿಗೆ ಪ್ರತಿಯೊಬ್ಬರ ಬದ್ಧತೆಯನ್ನು ಪುನರುಚ್ಚರಿಸುವುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ವಿಶ್ವ ಭೂಮಿಯ ದಿನದಂದು ಪರಿಸರ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಲಕ್ಷಾಂತರ ಜನರು ಒಟ್ಟಿಗೆ ಸೇರುತ್ತಾರೆ.ಪರಿಸರವನ್ನು ಸಂರಕ್ಷಿಸುವುದು ಪ್ರತಿ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಜಾಗತಿಕ ತಾಪಮಾನ ಏರಿಕೆ, ಮಾಲಿನ್ಯ ಹೆಚ್ಚಳ ಇವೇ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಕಾಲೀನ ಹಾಗೂ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಒಳಗೊಂಡಿದೆ.
ಪರಿಸರ ಸಂರಕ್ಷಣೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 22 ರಂದು ಭೂಮಿ ದಿನವನ್ನು ಆಚರಿಸಲಾಗುತ್ತದೆ. ಹೀಗಾಗಿ ಈ ದಿನ ಪ್ರಪಂಚದಾದ್ಯಂತ ಮಹತ್ವ ಪಡೆದುಕೊಂಡಿದೆ.
ಪರಿಸರದ ಬಗ್ಗೆ ಭಾರತದ ಸಾಂಪ್ರದಾಯಿಕ ಕ್ರಮಗಳ ಕುರಿತು ಮಾತನಾಡಿರುವ ತಮ್ಮ ಹಿಂದಿನ ಭಾಷಣಗಳನ್ನು ಒಳಗೊಂಡಿರುವ ವಿಡಿಯೊ ಕ್ಲಿಪ್ ಅನ್ನು ಮೋದಿ ಪೋಸ್ಟ್ ಮಾಡಿದ್ದಾರೆ.
ಈ ದಿನದ ಹೆಸರಲ್ಲಿ ವಿವಿಧ ಹವಾಮಾನ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು, ಪರಿಸರ ಸಾಕ್ಷರತೆಯ ವಿಷಯಗಳ ಕುರಿತು ಚರ್ಚೆಗಳನ್ನು ನಡೆಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.