ನವದೆಹಲಿ: ಮಣಿಪುರದ ಮೊರೆ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮ್ಯಾನ್ಮಾರ್ ಮೂಲದ ಮಾದಕವಸ್ತು ಕಳ್ಳಸಾಗಣಿಕೆದಾರನನ್ನು ಭದ್ರತಾ ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ.ಮಣಿಪುರದ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಅಂದಾಜು ₹ 500 ಕೋಟಿ ಮೌಲ್ಯದ ಮಾದಕವಸ್ತುವನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ 54 ಕೆ.ಜಿ. ಬ್ರೌನ್ ಶುಗರ್ ಮತ್ತು ಐಸ್ ಅಥವಾ ಕ್ರಿಸ್ಟಾಲ್ ಮೆಥ್ ಎಂದು ಕರೆಯಲಾಗುವ 154 ಕೆ.ಜಿ. ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ₹ 500 ಕೋಟಿ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಕುರಿತು ಗುಪ್ತಚರ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಭಾರತ-ಮ್ಯಾನ್ಮಾರ್ ಗಡಿಯಲ್ಲಿನ ಅಸ್ಸಾಂ ರೈಫಲ್ಸ್ ಕಾರ್ಯಾಚರಣೆ ಕೈಗೊಂಡಿತ್ತು ಎಂದು ಪ್ಯಾರಾಮಿಲಿಟರಿ ಪಡೆ ತಿಳಿಸಿದೆ.
‘ನಾರ್ಕೋ-ಭಯೋತ್ಪಾದನೆಯು ಮ್ಯಾನ್ಮಾರ್ ಮೂಲದ ಭಾರತದ ಉಗ್ರ ಸಂಘಟನೆಗಳಿಗೆ ಹಣಕಾಸಿನ ಪ್ರಮುಖ ಮೂಲವಾಗಿದೆ. ಭಾರತದಲ್ಲಿ ಯುವಜನರಲ್ಲಿ, ಮುಖ್ಯವಾಗಿ ಈಶಾನ್ಯ ಭಾಗದಲ್ಲಿ ಮಾದಕವಸ್ತುವಿನ ಚಟ ಏರಿಕೆಯಾಗುತ್ತಿರುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಅಷ್ಟಲ್ಲದೆ ಈ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೂ ಹಣಕಾಸಿನ ನೆರವು ನೀಡುತ್ತಿದೆ’ ಎಂದು ಹೇಳಿಕೆ ತಿಳಿಸಿದೆ.