ಹೊಸದಿಲ್ಲಿ : ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಇದೀಗ ತವರಿಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇವರಿಗೀಗ ಬಿಸಿಸಿಐ ಬಿಗ್ ಶಾಕ್ ಒಂದನ್ನು ಕೊಟ್ಟಿದೆ.
ಫೆ. 6ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆರಂಭವಾಗಲಿದ್ದು, ಅಹ್ಮದಾ ಬಾದ್ನಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಫೆ. ಒಂದರಂದು ಅಹ್ಮದಾಬಾದ್ ತಲುಪಬೇಕಿದೆ. ಆದರೆ ಕೋವಿಡ್ ಕಾರಣದಿಂದ ರೋಹಿತ್ ಪಡೆಗೆ ವಿಶೇಷ ವಿಮಾನ ಲಭ್ಯವಾಗುತ್ತಿಲ್ಲ. ಹೀಗಾಗಿ ತಾವೇ ವಾಹನ ವ್ಯವಸ್ಥೆ ಮಾಡಿಕೊಂಡು ಅಹ್ಮದಾಬಾದ್ಗೆ ಬರಬೇಕು ಎಂದು ಬಿಸಿಸಿಐ ಕ್ರಿಕೆಟಿಗರಿಗೆ ಸೂಚಿಸಿದೆ.
“ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ಆಟಗಾರರಿಗೆ ಚಾರ್ಟರ್ ವಿಮಾನ ಆಯೋಜಿಸಲು ಸಾಕಷ್ಟು ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ. ಇದರಿಂದ ಇತರ ಪ್ರಯಾಣಿಕರೊಂದಿಗಿನ ಸಂವಹನವನ್ನು ತಪ್ಪಿಸಬಹುದಿತ್ತು. ಆದರೆ ಈಗ ಸಮಯ ಕಳೆದು ಹೋಗಿದೆ. ಆದರೆ ಕೋಲ್ಕತಾದಲ್ಲಿ ನಡೆಯುವ ಟಿ20 ಸರಣಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗುವುದು’ ಎಂದು ಬಿಸಿಸಿಐ ಮೂಲದಿಂದ ತಿಳಿದು ಬಂದಿದೆ.
3 ದಿನ ಕ್ವಾರಂಟೈನ್
ಭಾರತದ ಆಟಗಾರರು, ಸಹಾಯಕ ಸಿಬಂದಿ ಮತ್ತು ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲರೂ ಫೆ. ಒಂದರಂದು ಅಹ್ಮದಾಬಾದ್ ತಲುಪಲಿದ್ದಾರೆ. ಬಳಿಕ ಇಲ್ಲಿನ ಹೊಟೇಲ್ ನಲ್ಲಿ 3 ದಿನಗಳ ಕ್ವಾರಂಟೈನ್ನಲ್ಲಿ ಇರುತ್ತಾರೆ. ಕೋವಿಡ್ ಟೆಸ್ಟ್ ಕೂಡ ಇರುತ್ತದೆ. ವರದಿ ನೆಗೆಟಿವ್ ಬಂದ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.