ಹೊಸದಿಲ್ಲಿ: ಇಲ್ಲಿನ ಪ್ರಗತಿ ಮೈದಾನದಲ್ಲಿ ಹಮ್ಮಿಕೊಳ್ಳಲಾದ ʻಭಾರತೀಯ ಅಂತಾರಾಷ್ಟ್ರೀಯ ವ್ಯಾಪಾರ ಮೇಳ-2021ʼದಲ್ಲಿ ಸ್ಥಾಪಿಸಲಾದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಳಿಗೆಗಳಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿದರು.
ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳು/ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಮೇಳದಲ್ಲಿ ಸಚಿವಾಲಯದ ಎಲ್ಲ ಇಲಾಖೆಗಳು ಭಾಗವಹಿಸಿರುವುದು ಶ್ಲಾಘನೀಯ ಎಂದು ಸಚಿವರು ಹೇಳಿದರು.
ಕೃಷಿ ವಲಯಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಪ್ರದರ್ಶಿಸಿರುವ ಸಚಿವಾಲಯವು ರೈತರೊಂದಿಗೆ ನೇರ ಸಂವಾದವನ್ನು ಏರ್ಪಡಿಸಿದೆ. ರೈತರೊಂದಿಗೆ ಸಂಪರ್ಕ ಸಾಧಿಸಲು ಸಚಿವಾಲಯಕ್ಕೆ ಇಂತಹ ಮೇಳಗಳು ತುಂಬಾ ಸಹಾಯಕವಾಗಿವೆ. ಮೇಳಗಳು ಮತ್ತು ಪ್ರದರ್ಶನಗಳು ಕೃಷಿ ಯೋಜನೆಗಳ ಉತ್ತೇಜನಕ್ಕೆ ಪ್ರಮುಖ ವೇದಿಕೆಯನ್ನು ಒದಗಿಸುತ್ತವೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪ್ರಗತಿ ಮೈದಾನದಲ್ಲಿ 2021ರ ನವೆಂಬರ್ 14ರಿಂದ 27ರವರೆಗೆ ಆಯೋಜಿಸಲಾಗಿರುವ ʻಭಾರತೀಯ ಅಂತಾರಾಷ್ಟ್ರೀಯ ವ್ಯಾಪಾರ ಮೇಳ-2021ʼರಲ್ಲಿ ಪಾಲ್ಗೊಂಡಿದೆ. ಈ ಮೇಳದ ಪ್ರಮುಖ ವಿಷಯವಾದ ʻಆತ್ಮನಿರ್ಭರ್ ಭಾರತʼದ ಒಳನೋಟಗಳನ್ನು ಸಚಿವಾಲಯದ ಮಳಿಗೆಗಳ ಮೂಲಕ ಪ್ರದರ್ಶಿಸಲಾಗಿದೆ.
ಈ ವರ್ಷ ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ರಾಷ್ಟ್ರೀಯ ಸಾವಯವ ಕೃಷಿ ಕೇಂದ್ರ, ಮಾರುಕಟ್ಟೆ ನಿರ್ದೇಶನಾಲಯ, ಹಿಸ್ಸಾರ್ನ ಉತ್ತರ ವಲಯದ ಕೃಷಿ ಯಂತ್ರೋಪಕರಣಗಳ ತರಬೇತಿ ಮತ್ತು ಪರೀಕ್ಷಾ ಸಂಸ್ಥೆ, ಫರೀದಾಬಾದ್ನ ಸಸ್ಯ ಸಂರಕ್ಷಣೆ, ಕ್ವಾರಂಟೈನ್ ಮತ್ತು ಶೇಖರಣಾ ನಿರ್ದೇಶನಾಲಯ, ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ, ಸಾಂಬಾರು ಪದಾರ್ಥ ಮಂಡಳಿ, ತೆಂಗು ಅಭಿವೃದ್ಧಿ ಮಂಡಳಿ, ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಮಳಿಗೆಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ.