ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಬೆಳಿಗ್ಗೆ ದೆಹಲಿಯಿಂದ ಢಾಕಾಗೆ ಪ್ರಯಾಣಿಸಿದರು.ಕೋವಿಡ್ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ರಾಮನಾಥ ಕೋವಿಂದ್ ಅವರು ವಿದೇಶ ಪ್ರಯಾಣ ಕೈಗೊಂಡಿದ್ದಾರೆ.
ಅಲ್ಲಿ 50ನೇ ವರ್ಷದ ಬಾಂಗ್ಲಾ ವಿಮೋಚನಾ ದಿನಾಚರಣೆಯಲ್ಲಿ (ವಿಜಯ ದಿವಸ್) ಭಾಗಿಯಾಗಲಿದ್ದಾರೆ.ಅವರು ಮೂರು ದಿನಗಳ ಬಾಂಗ್ಲಾದೇಶ ಭೇಟಿಯಲ್ಲಿದ್ದಾರೆ. ಬಾಂಗ್ಲಾ ವಿಮೋಚನಾ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಬಾಂಗ್ಲಾದೇಶಕ್ಕೆ ವಿಮೋಚನೆ ದೊರೆಯಿತು. ಆ ವಿಜಯೋತ್ಸವದ ಅಂಗವಾಗಿ ಭಾರತ ಸಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ರಾಷ್ಟ್ರಪತಿಗಳ ಬಾಂಗ್ಲಾ ಭೇಟಿಯ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹರ್ಷ್ವರ್ಧನ್ ಶ್ರಿಂಗ್ಲಾ, ಈ ಸಂದರ್ಭವು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿರುವುದಾಗಿ ತಿಳಿಸಿದ್ದಾರೆ.