ದೆಹಲಿ: ದೈಹಿಕ ಸಮಗ್ರತೆಯು ಆರ್ಟಿಕಲ್21 ರ ಅಡಿಯಲ್ಲಿ ಮೂಲಭೂತ ಹಕ್ಕಿನ ಭಾಗವಾಗಿದ್ದು ಇದಕ್ಕೆ ಧಕ್ಕೆ ತರುವಂತೆ ಒತ್ತಾಯವಾಗಿ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರ ಸರ್ಕಾರದ ಲಸಿಕಾ ನೀತಿಯ ಕುರಿತಾಗಿ ಸಲ್ಲಿಸಲಾಗಿದ್ದ ಆಕ್ಷೇಪಣೆಗಳ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲಯವು ಹೀಗೆ ಹೇಳಿದೆ. ಆದರೆ ರೋಗದ ಗಂಭೀರತೆ, ಆಮ್ಲಜನಕ ಮಟ್ಟದಲ್ಲಿನ ಇಳಿಕೆ ಮತ್ತು ಸಾವಿನ ಪ್ರಮಾಣದ ಕುರಿತು ತಜ್ಞರ ಅಭಿಪ್ರಾಯದ ಆಧಾರದಲ್ಲಿ ಕೇಂದ್ರ ಸರ್ಕಾರದ ಲಸಿಕಾ ನೀತಿಯು ಅಸಮಂಜಸವಲ್ಲ ಎಂದು ಹೇಳಿದೆ.
ಲಸಿಕೆಗೆ ಒತ್ತಾಯ ಮಾಡದಿರುವುದು ಕೇವಲ ಈ ಅರ್ಜಿಗೆ ಸಂಬಂಧಿಸಿದ್ದಾಗಿದ್ದು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ರೋಗದ ಹರಡುವಿಕೆ ತಡೆಗಟ್ಟಲು ಅಗತ್ಯವಿರುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಕೋವಿಡ್ ಪೂರಕ ನಡೆವಳಿಕೆಗೆ ಸಂಬಂಧಿಸಿದಂತೆ ಲಸಿಕೆಯಾಗದ ವ್ಯಕ್ತಿಗಳನ್ನು ಸಾರ್ವಜಿಕ ಪ್ರದೇಶಗಳಿಗೆ ನಿರ್ಬಂಧಿಸಬಹುದಾಗಿದೆ. ಆ ಕುರಿತು ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ.
ಇನ್ನು ಮಕ್ಕಳಿಗೆ ಲಸಿಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಲಸಿಕಾ ನೀತಿಯನ್ನು ಸುಪ್ರಿಂ ಕೋರ್ಟ್ ಅನುಮೋದಿಸಿದ್ದು ಲಸಿಕೆಗೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಯೋಗಗಳು, ಪ್ರಮುಖ ಸಂಶೋಧನೆಗಳು ಮತ್ತು ಲಸಿಕೆಗಳ ಫಲಿತಾಂಶಗಳನ್ನು ಬಹಿರಂಗ ಪಡಿಸುವಂತೆ ಸೂಚಿಸಿದೆ.
ಇನ್ನು ಲಸಿಕೆಯಿಂದಾಗುವ ಪ್ರತಿಕೂಲ ಪರಿಣಾಮಗಳಬಗ್ಗೆ ಉಲ್ಲೇಖಿಸಿ ಎಲ್ಲಾ ಶಂಕಿತ ಪ್ರತಿಕೂಲ ಪರಿಣಾಮಗಳ ಮಾಹಿತಿಯು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ವರ್ಚುವಲ್ ವೇಧಿಕೆಯೊಂದರ ಮೂಲಕ ಮಾಹಿತಿಗಳನ್ನು ಬಿಡುಗಡೆಮಾಡಲು ಹೇಳಿದೆ.