ನವದೆಹಲಿ: ದೇಶದಲ್ಲಿ ಕ್ರಿಪ್ಟೊಕರೆನ್ಸಿಯನ್ನು ಕಾನೂನುಬದ್ಧಗೊಳಿಸುವ ಅಥವಾ ನಿಷೇಧಿಸುವ ನಿರ್ಧಾರವನ್ನು ಈ ಹಂತದಲ್ಲಿ ತೆಗೆದುಕೊಳ್ಳುವುದಿಲ್ಲ, ಕ್ರಿಪ್ಟೊಕರೆನ್ಸಿಯ ಕುರಿತು ಸಲಹೆಗಳನ್ನು ಪಡೆದ ಬಳಿಕ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ತಿಳಿಸಿದ್ದಾರೆ.
ಸಂಸತ್ನಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಂದಿದ್ದಾರೆ.ಕ್ರಿಪ್ಟೊಕರೆನ್ಸಿ ವಹಿವಾಟಿನಿಂದ ಬರುವ ಲಾಭಕ್ಕೆ ಶೇ 30ರಷ್ಟು ತೆರಿಗೆ ವಿಧಿಸುವ ನಿರ್ಧಾರವನ್ನು ಇದೇ ವೇಳೆ ಅವರು ಸಮರ್ಥಿಸಿಕೊಂಡಿದ್ದಾರೆ. ತೆರಿಗೆ ವಿಧಿಸುವ ಸಾರ್ವಭೌಮ ಹಕ್ಕು ಸರ್ಕಾರಕ್ಕೆ ಇದೆ ಎಂದಿದ್ದಾರೆ.
ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, 2022-23ರ ಬಜೆಟ್ನಿಂದ ಆರ್ಥಿಕತೆಯಲ್ಲಿ ಸ್ಥಿರತೆ ಮೂಡಲಿದೆ ಎಂದು ಹೇಳಿದ್ದಾರೆ.
ಬಜೆಟ್ನಲ್ಲಿ ಬಡವರಿಗೆ ಹೆಚ್ಚಿನದೇನನ್ನೂ ನೀಡಲ್ಲ ಎನ್ನುವ ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಡತನ ಎಂದರೆ ಆಹಾರ, ಹಣ ಅಥವಾ ಭೌತಿಕ ವಸ್ತುಗಳ ಕೊರತೆ ಎಂದಲ್ಲ. ಆತ್ಮಸ್ಥೈರ್ಯವಿದ್ದರೆ ಅದನ್ನು ಜಯಿಸಬಹುದು. ಬಡತನ ಎನ್ನುವುದು ಒಂದು ಮನಸ್ಸಿನ ಸ್ಥಿತಿ ಎಂದು ನಿಮ್ಮ (ಕಾಂಗ್ರೆಸ್) ಮಾಜಿ ಅಧ್ಯಕ್ಷರೊಬ್ಬರು ಹೇಳಿದ್ದಾರೆ. ಈ ರೀತಿಯ ಬಡತನವನ್ನು ನಿವಾರಣೆ ಮಾಡಬೇಕಿತ್ತು ಎನ್ನುವುದು ನಿಮ್ಮ ಬಯಕೆಯೇ ಎನ್ನುವುದನ್ನು ಸ್ಪಷ್ಟಪಡಿಸಿ ಎಂದು ಅವರು ವಿರೋಧಪಕ್ಷಗಳಿಗೆ ಪ್ರಶ್ನೆ ಮಾಡಿದ್ದಾರೆ.
2013ರಲ್ಲಿ ರಾಹುಲ್ ಗಾಂಧಿ ಅವರು ಬಡತನ ಎನ್ನುವುದು ಒಂದು ಮನಸ್ಥಿತಿ ಎಂದು ಹೇಳಿದ್ದರು.
ಕೋವಿಡ್ ಸಾಂಕ್ರಾಮಿಕದಿಂದಾಗಿ ಶೇ 67ರಷ್ಟು ಎಂಎಸ್ಎಂಇಗಳು ಬಾಗಿಲು ಮುಚ್ಚಿವೆ ಎನ್ನುವ ಆರೋಪವನ್ನು ನಿರ್ಮಲಾ ನಿರಾಕರಿಸಿದ್ದಾರೆ.
ಶೇ 67ರಷ್ಟು ಎಂಎಸ್ಎಂಇಗಳು ಬಾಗಿಲು ಮುಚ್ಚಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ ಎಂದು ಉಲ್ಲೇಖಿಸಲು ವರದಿ ವಿಫಲವಾಗಿದೆ. ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನೀಡಿದ ಸಾಲ ಖಾತರಿ ಯೋಜನೆಯನ್ನು ಬಳಸಿಕೊಂಡು ಆ ಎಂಎಸ್ಎಂಗಳು ಈಗ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.