ನವದೆಹಲಿ (ಡಿ. 21) : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ 6 ಮಂದಿ ಸೇರಿದಂತೆ ದೇಶಾದ್ಯಂತ ಸೋಮವಾರ ಒಂದೇ ದಿನ 18 ರೂಪಾಂತರಿ ಒಮಿಕ್ರೋನ್ ಕೇಸ್ಗಳು ಪತ್ತೆಯಾಗಿವೆ. ಇದರೊಂದಿಗೆ ಒಮಿಕ್ರೋನ್ ಸೋಂಕಿತರ ಸಂಖ್ಯೆ 169ಕ್ಕೆ ಜಿಗಿದಿದೆ.
ಸೋಮವಾರ ದೆಹಲಿಯಲ್ಲಿ 6, ಕರ್ನಾಟಕ 5, ಕೇರಳ 4 ಮತ್ತು ಗುಜರಾತ್ನಲ್ಲಿ 3 ಒಮಿಕ್ರೋನ್ ಕೇಸ್ ಪತ್ತೆಯಾಗಿವೆ. ಇದೇ ವೇಳೆ, ದೆಹಲಿಯಲ್ಲಿ ಒಮಿಕ್ರೋನ್ ಸೋಂಕಿತರ ಸಂಖ್ಯೆ 28ಕ್ಕೆ ಜಿಗಿದಿದೆ. ಇದರಲ್ಲಿ 12 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ ಅತಿಹೆಚ್ಚು (54), ದೆಹಲಿ (28), ರಾಜಸ್ಥಾನ (17), ಕರ್ನಾಟಕ (19), ತೆಲಂಗಾಣ (20), ಕೇರಳ (15), ಗುಜರಾತ್ (14) ಹಾಗೂ ಆಂಧ್ರಪ್ರದೇಶ, ಚಂಡೀಗಢ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ರೂಪಾಂತರಿ ತಳಿ ಕೇಸ್ ಪತ್ತೆಯಾದಂತಾಗಿದೆ.
6563 ಕೇಸು, 132 ಸಾವು: ಸಕ್ರಿಯ ಕೇಸು 82267ಕ್ಕೆ ಇಳಿಕೆ
ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 6,563 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದೇ ಅವಧಿಯಲ್ಲಿ 132 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಪ್ರಕರಣ 3.47 ಕೋಟಿಗೆ ಮತ್ತು ಒಟ್ಟು ಸಾವು 4.77 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 82,267ಕ್ಕೆ ಇಳಿದಿದ್ದು, ಇದು 572 ದಿನಗಳ (19 ತಿಂಗಳ) ಕನಿಷ್ಠವಾಗಿದೆ. ದೇಶಾದ್ಯಂತ ಗುಣಮುಖ ದರ ಶೇ.98.39ರಷ್ಟಿದೆ.
ಕಳೆದ 53 ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ 15 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ. 0.75ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,646 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 137.67 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
ದಿಲ್ಲಿಯ ಎಲ್ಲಾ ಕೊರೋನಾ ಪಾಸಿಟಿವ್ ವರದಿ ಜಿನೋಂ ಸೀಕ್ವೆನ್ಸಿಂಗ್ ಪರೀಕ್ಷೆಗೆ
ಭಾರತದಲ್ಲೂ ಒಮಿಕ್ರೋನ್ ವ್ಯಾಪಕವಾಗುತ್ತಿರುವ ಭೀತಿಯ ನಡುವೆಯೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗುತ್ತಿದೆ. ಹೀಗಾಗಿ ಕೊರೋನಾ ದೃಢಪಟ್ಟಎಲ್ಲಾ ವರದಿಗಳನ್ನು ಒಮಿಕ್ರೋನ್ ಪತ್ತೆ ಹಚ್ಚುವ ಪರೀಕ್ಷೆಯಾದ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಭಾನುವಾರ ಒಂದೇ ದಿನ ನಗರದಲ್ಲಿ 100ಕ್ಕೂ ಹೆಚ್ಚು ಕೇಸ್ಗಳು ಪತ್ತೆಯಾದವು. ಇದು ಯಾವ ತಳಿ ಎಂದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಕೊರೋನಾ ದೃಢಪಟ್ಟಎಲ್ಲಾ ವರದಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಕಳಿಸಿಕೊಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಅಲ್ಲದೆ ನಗರದ ಜನತೆಗೆ ಬೂಸ್ಟರ್ ಡೋಸ್ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಅವರು, ‘ಜನರು ಹೊಸ ರೂಪಾಂತರಿ ತಳಿ ಬಗ್ಗೆ ಆತಂಕ ಮತ್ತು ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಆದರೆ ವೈರಸ್ ವಿರುದ್ಧದ ಪರಿಣಾಮಕಾರಿಯಾದ ಮಾಸ್ಕ್ ಅನ್ನು ಧರಿಸಲೇಬೇಕು’ ಎಂದು ಕಿವಿಮಾತು ಹೇಳಿದ್ದಾರೆ.