ನವದೆಹಲಿ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಯುವ ಕಾಂಗ್ರೆಸ್ ಮುಖಂಡರೊಂದಿಗೆ ಮಂಗಳವಾರ ಬೆಳಿಗ್ಗೆ ನವದೆಹಲಿಯಲ್ಲಿ ಸೈಕಲ್ ಮೂಲಕ ಸಂಸತ್ ಭವನಕ್ಕೆ ತೆರಳಿ ಪ್ರತಿಭಟಿಸಿದರು.
ಕೇಂದ್ರ ಸರ್ಕಾರ ಜನಸಾಮಾನ್ಯರ ಬಗ್ಗೆ ಆಲೋಚಿಸದೆ ತೈಲ ಬೆಲೆ ಹೆಚ್ಚಿಸುವ ಮೂಲಕ, ಬಡವರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಅವರು ಆರೋಪಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಮೇಲಿನ ತೆರಿಗೆ ಹೆಚ್ಚಿಸಿದ್ದರಿಂದ ಪೆಟ್ರೋಲ್ ಬೆಲೆ ಶತಕ ದಾಟಿದೆ. ಕೂಡಲೇ ಬೆಲೆ ಇಳಿಕೆ ಮಾಡಿ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ ಮಾತನಾಡಿ, ‘ತೈಲ ದರ ಏರಿಕೆಯಿಂದಾಗಿ ಜನರು ಕಾರುಗಳನ್ನು ಮೂಲೆಯಲ್ಲಿರಿಸಿ, ಸೈಕಲ್ ಏರುತ್ತಿದ್ದಾರೆ. ಅಂತೆಯೇ ನಾವೂ ಸಂಚರಿಸುವುದಕ್ಕೆ ಸೈಕಲ್ ಹತ್ತಿದ್ದೇವೆ’ ಎಂದು ಹೇಳಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ರಾಹುಲ್ ರಾಯ್ ಹಾಜರಿದ್ದರು.