ಬೆಂಗಳೂರು: ರಾಜ್ಯದಲ್ಲಿ ಪ್ರತಿಯೊಬ್ಬರೂ ಶಾಂತಿ, ಸುವ್ಯವಸ್ಥೆ ಕಾಪಾಡಿ ಸಂಯಮದಿಂದ ವರ್ತಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.
ವಿಧಾಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಶಾಂತಿ ಸೌಹಾರ್ದತೆ, ಸಹೊದರತ್ವಕ್ಕೆ ಹೆಸರುವಾಸಿಯಾದ ರಾಜ್ಯ. ಕಾನೂನು ಸುವ್ಯವಸ್ಥೆಗೆ ಯಾರೊಬ್ಬರೂ ಧಕ್ಕೆ ಉಂಟು ಮಾಡಬಾರದು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರೂ ಕಾನೂನಿಗೆ ಗೌರವ ಕೊಟ್ಟು ಶಾಂತಿಯಿಂದ ವರ್ತಿಸಬೇಕು. ಯಾರೊಬ್ಬರೂ ಗೊಂದಲಗಳನ್ನು ಸೃಷ್ಟಿಸಬಾರದು ಎಂದು ಹೇಳಿದರು.
ಕರ್ನಾಟಕ ಮೊದಲಿನಿಂದಲೂ ಶಾಂತಿ ಪ್ರಿಯ ನಾಡು. ಅನೇಕ ವಿಷಯಗಳಲ್ಲಿ ನಾವು ಇತರರಿಗೆ ಮಾದರಿಯಾಗಿದ್ದೇವೆ. ಅದನ್ನು ಕಾಪಾಡಿ ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿ.
ರಾಜ್ಯದಲ್ಲಿ ಪ್ರಸ್ತುತ ಹಲವಾರು ಸಮಸ್ಯೆಗಳಿವೆ. ಹಿಜಾಬ್ನಿಂದ ಉಂಟಾಗಿದ್ದ ಸಂಘರ್ಷ ಕೊನೆಗೆ ಹೈಕೋರ್ಟ್ ತೀರ್ಪಿನಿಂದ ಇತ್ಯರ್ಥವಾಗಿದೆ. ಏನೇ ಸಮಸ್ಯೆ ಬಂದರೂ ಕಾನೂನಿನಡಿಯೇ ಬಗೆಹರಿಸಲು ಸರ್ಕಾರ ಸಿದ್ಧವಿದೆ. ಜನತೆಯು ಗೊಂದಲಕ್ಕೆ ಉಂಟಾಗಬಾರದು ಎಂದರು.
ಆಂಧ್ರ ಸಿಎಂ ಜತೆ ಮಾತುಕತೆ:
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ರೆಡ್ಡಿ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸುತ್ತೇನೆ. ಮುಂದೆ ಇಂತಹ ಘಟನೆಗಳು ಮರುಕಳುಹಿಸದಂತೆ ಎಲ್ಲರೂ ಎಚ್ಚರವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಶ್ರೀಶೈಲಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿಧ ವಿವಿಧ ಭಾಗಗಳಿಂದ ದೊಡ್ಡ ಮಟ್ಟದಲ್ಲಿ ಭಕ್ತರು ಸೇರುತ್ತಾರೆ. ಭಕ್ತರು ಬಂದಾಗ ಇಂತಹ ಘಟನೆಗಳು ನಡೆಯಬಾರದು. ಏನೇ ಸಣ್ಣಪುಟ್ಟ ಗೊಂದಲಗಳಿದ್ದರೂ ನಾವೆಲ್ಲರೂ ಅನುಸರಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಸೂಕ್ತ ರಕ್ಷಣೆ ಕೊಡುವಂತೆ ಆಂಧ್ರ ಪ್ರದೇಶದ ಸಿಎಂ ಹಾಗೂ ಅಧಿಕಾರಿಗಳ ಜತೆ ನಾನು ಮಾತನಾಡುತ್ತೇನೆ. ಯಾವಾ ಕಾರಣಕ್ಕಾಗಿ ಘಟನೆ ನಡೆದಿದೆ ಎಂಬ ಸಂಪೂರ್ಣವಾದ ಮಾಹಿತಿ ಇಲ್ಲ. ಆದರೂ ಇಂತಹ ಘಟನೆ ನಡೆದಿರುವುದು ನೋವಿನ ಸಂಗತಿ ಎಂದು ಸಿಎಂ ವಿಷಾದಿಸಿದರು.