ನವದೆಹಲಿ: ಕೋವಿಡ್-19 ಹರಡದಂತೆ ನಿಯಂತ್ರಣ ಹಾಗೂ ಮರಣ ಪ್ರಮಾಣ ತಡೆಗೆ ಸೋಂಕು ಪತ್ತೆ, ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಪತ್ರ ಬರೆದಿದೆ. ಕೆಲ ಜಿಲ್ಲೆಗಳಲ್ಲಿ ಸೋಂಕು ಪ್ರಮಾಣ, ಸಾಪ್ತಾಹಿಕ ಪಾಸಿಟಿವಿಟಿ ದರ ಹಾಗೂ ವಾರದ ಸಾವಿನ ದರ ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರ ಈ ರೀತಿಯ ಸಲಹೆ ನೀಡಿದೆ.
ಜಿನೋಮ್ ಸೀಕ್ವೆನ್ಸಿಂಗ್ ಗಾಗಿ ಎಲ್ಲಾ ಪಾಸಿಟಿವ್ ಮಾದರಿಗಳನ್ನು ಕಳುಹಿಸುವುದಲ್ಲದೇ, ಅಂತಾರಾಷ್ಟ್ರೀಯ ಪ್ರಯಾಣಿರ ಮೇಲೆ ಎಲ್ಲಾ ರಾಜ್ಯಗಳು ನಿಗಾ ವಹಿಸಬೇಕು, ಹಾಟ್ ಸ್ಪಾಟ್ ಗಳ ಮೇಲ್ವಿಚಾರಣೆ ಮಾಡಬೇಕು, ಪಾಸಿಟಿವ್ ಜನರನ್ನು ಪ್ರಾಮಾಣಿಕವಾಗಿ ಪತ್ತೆ ಹಚ್ಚಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶನಿವಾರ ಹೇಳಿದ್ದಾರೆ.