ತಿರುವನಂತಪುರಂ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಇದೊಂದು ಅಸಾಂವಿಧಾನಿಕ ನಡೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಶಶಿ ತರೂರ್ ಖಂಡಿಸಿದ್ದಾರೆ.
ಸಿಎಎ ಜಾರಿ ಕುರಿತು ಸುಪ್ರೀಂ ಕೋರ್ಟ್ಗೆ ಮೆಟ್ಟಿಲೇರಿರುವ ಪ್ರತಿಪಕ್ಷಗಳ ಕ್ರಮವನ್ನು ಬೆಂಬಲಿಸಿ ಮಾತನಾಡಿರುವ ಸಂಸದ ಶಶಿ ತರೂರ್, “ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಎ ಕಾಯ್ದೆಯನ್ನು ರದ್ದುಗೊಳಿಸಲಾಗುವುದು” ಎಂದು ಹೇಳಿದ್ದಾರೆ.
ಕಾನೂನಿನಲ್ಲಿರುವ ನ್ಯೂನತೆಗಳನ್ನು ಎತ್ತಿ ತೋರಿಸಲು ಐತಿಹಾಸಿಕ ಪುರಾವೆಗಳನ್ನು ಪ್ರಸ್ತುತಪಡಿಸಿದ ಶಶಿ ತರೂರ್, CAA ನೈತಿಕವಾಗಿ ಮತ್ತು ಸಾಂವಿಧಾನಿಕವಾಗಿ ತಪ್ಪಾಗಿದೆ ಎಂದು ವಾದಿಸಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭವನ್ನು ನೆನಪಿಸಿದ ಶಶಿ ತರೂರ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಮೌಲಾನಾ ಆಜಾದ್ ಮತ್ತು ಡಾ. ಅಂಬೇಡ್ಕರ್ ಸೇರಿದಂತೆ ರಾಷ್ಟ್ರದ ಪಿತಾಮಹರು ಧರ್ಮದ ಕಲ್ಪನೆಯನ್ನು ರಾಷ್ಟ್ರದ ಆಧಾರವಾಗಿ ತಿರಸ್ಕರಿಸಿದ್ದರು. ಭಾರತದ ಸಂವಿಧಾನ ಮತ್ತು ರಾಷ್ಟ್ರೀಯತೆಯು ಧಾರ್ಮಿಕ ಸಂಬಂಧವನ್ನು ಲೆಕ್ಕಿಸದೆ ಎಲ್ಲರನ್ನೂ ಒಳಗೊಳ್ಳುತ್ತದೆ ಎಂದು ಒತ್ತಿ ಹೇಳಿದರು.