ರಾಯ್ಪುರ: ಛತ್ತೀಸ್ಗಡದ ದಾಂತೇವಾಡ ಜಿಲ್ಲೆಯಲ್ಲಿ ಗುರುವಾರ ನಕ್ಸಲರ ತಂಡ ಸ್ಫೋಟಕ ಬಳಸಿ ಎಸ್ಯುವಿ ವಾಹನವನ್ನು ಸ್ಫೋಟಿಸಿದೆ. ಇದರ ಪರಿಣಾಮವಾಗಿ ಒಬ್ಬರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ.
ರಾಯ್ಪುರದಿಂದ 400 ಕಿ.ಮೀ.ದೂರದಲ್ಲಿರುವ ಮಲೆವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಘೋಟಿಯಾ ಗ್ರಾಮದ ಬಳಿ ಬೆಳಿಗ್ಗೆ 7.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ನಿರ್ಮಾಣ ಹಂತದಲ್ಲಿರುವ ನಾರಾಯಣಪು– ದಾಂತೇವಾಡ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಬೊಲೆರೊ ವಾಹನ ಸ್ಫೋಟಕ್ಕೆ ತುತ್ತಾಗಿದ್ದು, ಅದರಲ್ಲಿದ್ದ ಒಬ್ಬ ಮಹಿಳೆ ಸೇರಿದಂತೆ 12 ಮಂದಿ ಇದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.