ಸಹರಾನ್ಪುರ: ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಅವರು ಜೂನ್ 28ರಂದು ತಮ್ಮ ಮೇಲೆ ನಡೆದ ದಾಳಿಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಜೂನ್ 28 ರಂದು ಸಂಜೆ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ದೇವಬಂದ್ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿ ನಗರ ಕಾಲೋನಿ ಬಳಿ ಕಾರಿನಲ್ಲಿ ಬಂದ ನಾಲ್ವರು ದಾಳಿಕೋರರು ಆಜಾದ್ ಅವರ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜುಲೈ 1 ರಂದು, ಹರಿಯಾಣ ವಿಶೇಷ ಕಾರ್ಯಪಡೆಯ ಅಂಬಾಲಾ ಘಟಕವು ಉತ್ತರ ಪ್ರದೇಶ ಪೊಲೀಸರ ಸಮನ್ವಯದೊಂದಿಗೆ ಅಂಬಾಲಾದ ಶಹಜಾದ್ಪುರ ಪ್ರದೇಶದ ಧಾಬಾ ಬಳಿ ನಾಲ್ವರನ್ನು ಬಂಧಿಸಿತ್ತು. ಪೊಲೀಸರ ಪ್ರಕಾರ, ಕಳೆದ ಕೆಲವು ತಿಂಗಳುಗಳಲ್ಲಿ ಭೀಮ್ ಆರ್ಮಿ ಸ್ಥಾಪಕ ನೀಡಿದ ಹೇಳಿಕೆಗಳಿಂದ ಕೋಪಗೊಂಡು ಅವರ ಮೇಲೆ ಗುಂಡು ಹಾರಿಸಿದ್ದೇವೆ ಎಂದು ಬಂಧಿತ ವ್ಯಕ್ತಿಗಳು ವಿಚಾರಣೆಯ ಸಮಯದಲ್ಲಿ ಹೇಳಿದ್ದಾರೆ ಎಂದು ತಿಳಿಸಿದ್ದರು..
ಆದರೆ ಚಂದ್ರಶೇಖರ್ ಆಜಾದ್ ಅವರು ಪೊಲೀಸರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನ್ನ ಮೇಲೆ ದಾಳಿ ಮಾಡಲು ಪಿಸ್ತೂಲ್ ಅನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ, ಆದರೆ ಬಂಧಿತರ ಬಳಿಯಿಂದ ಪೊಲೀಸರು ಎರಡು ದೇಶೀಯ ನಿರ್ಮಿತ ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ‘ಈ ತನಿಖೆಯನ್ನು ಸಿಬಿಐ ಗೆ ವಹಿಸಬೇಕು. ಸಿಬಿಐ ತನಿಖೆಯು ದಾಳಿಯ ಪಿತೂರಿಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತದೆ. ದಾಳಿಕೋರರಿಗೆ ಯಾರು ಹಣ ನೀಡಿದ್ದಾರೆ ಎಂಬುದನ್ನು ಪೊಲೀಸರು ಪ್ರಾಮಾಣಿಕವಾಗಿ ಕಂಡುಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.