ಜೈಪುರ: ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲು ಖಾತರಿಯಾದ ಕೂಡಲೇ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಗೆದ್ದ ಸ್ಥಾನಗಳು ಮ್ಯಾಜಿಕ್ ಸಂಖ್ಯೆ (100) ದಾಟುತ್ತಿದ್ದಂತೆಯೇ ಭಾನುವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
72 ವರ್ಷದ ಗೆಹಲೋತ್ ಅವರು ಒಟ್ಟು ಮೂರು ಸಲ ಮುಖ್ಯಮಂತ್ರಿ ಆಗಿದ್ದರು.
‘ಹೊಸ ಸರ್ಕಾರಕ್ಕೆ ಶುಭ ಹಾರೈಸುತ್ತೇನೆ. ನನ್ನ ಸಲಹೆ ಏನೆಂದರೆ, ಕಷ್ಟಪಟ್ಟು ಕೆಲಸ ಮಾಡಿದರೂ ನಮಗೆ ಯಶಸ್ಸು ಸಿಗಲಿಲ್ಲ. ಸರ್ಕಾರ ರಚಿಸಿದ ನಂತರ ನೀವು ಕೆಲಸ ಮಾಡಬಾರದು ಎಂಬುದು ಇದರ ಅರ್ಥವಲ್ಲ’ ಎಂದು ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಚಿರಂಜೀವಿ ಆರೋಗ್ಯ ವಿಮಾ ಯೋಜನೆ ಒಳಗೊಂಡಂತೆ ಕಾಂಗ್ರೆಸ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳನ್ನು ಹೊಸ ಸರ್ಕಾರ ಮುಂದುವರಿಸಬೇಕು ಎಂದು ಕೇಳಿಕೊಂಡಿದ್ದಾರೆ.