ನವದೆಹಲಿ: ಭಾರತದಿಂದ ರಷ್ಯಾಕ್ಕೆ ಸಮುದ್ರ ಮಾರ್ಗದ ಮೂಲಕ ಬಾಳೆಹಣ್ಣು ರಫ್ತಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೃಷಿ ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಭಾರತದಿಂದ ರಷ್ಯಾಕ್ಕೆ ಸಮುದ್ರ ಮಾರ್ಗದ ಮೂಲಕ ಬಾಳೆಹಣ್ಣು ರಫ್ತು ಮಾಡಲು ಮುಂಬೈ ಮೂಲದ ರಫ್ತು ಸಂಸ್ಥೆ ಗುರುಕೃಪ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ್ ಗೆ ಅನುಮತಿ ನೀಡಿದೆ.
ಈ ಸಂಸ್ಥೆ ಈಗಾಗಲೇ ಯುರೋಪ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ನಿರಂತರವಾಗಿ ತಾಜಾ ಹಣ್ಣುಗಳು ಹಾಗೂ ತರಕಾರಿಗಳನ್ನು ರಫ್ತು ಮಾಡುತ್ತಿದೆ. 1540 ಬಾಕ್ಸ್ ಬಾಳೆಹಣ್ಣುಗಳನ್ನು ಫೆ.17ರಂದು ಮಹಾರಾಷ್ಟ್ರದಿಂದ ರಷ್ಯಾಕ್ಕೆ ಕುಳಿಸಲಾಗಿದ್ದು, ಈ ಹಡಗಿಗೆ ಎಪಿಇಡಿಎ ಮುಖ್ಯಸ್ಥ ಅಭಿಷೇಕ ದೇವ್ ಚಾಲನೆ ನೀಡಿದ್ದಾರೆ. ಎಪಿಇಡಿಎ ಹೊಸ ಉತ್ಪನ್ನಗಳನ್ನು ಹೊಸ ಸ್ಥಳಗಳಿಗೆ ರಫ್ತು ಮಾಡಲು ಎಪಿಇಡಿಎ ಮುಖ್ಯಸ್ಥರು ಹೆಚ್ಚಿನ ಉತ್ತೇಜನ ನೀಡುತ್ತಿದ್ದಾರೆ.
ಮಹಿಳಾ ಉದ್ಯಮಿಗಳಿಗೆ ವಿಶೇಷ ಉತ್ತೇಜನ ನೀಡುತ್ತಿರುವ ಎಪಿಇಡಿಎ ಹಣಕಾಸಿನ ನೆರವಿನ ಯೋಜನೆಯನ್ನು ಎಪಿಇಡಿಎ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಸಮುದ್ರ ಮಾರ್ಗದ ನಿಯಮಗಳನ್ನು ರೂಪಿಸಲು ನೆರವು ನೀಡಿದ್ದ ಸೆಂಟ್ರಲ್ ಇನ್ಸಿಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ಸಂಸ್ಥೆಗೆ ಕೂಡ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ಇತ್ತೀಚೆಗೆ ರಷ್ಯಾ ಭಾರತದಿಂದ ಉಷ್ಣವಲಯದ ಹಣ್ಣುಗಳನ್ನು ಖರೀದಿಸುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿತ್ತು. ಈ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಸೇರಿತ್ತು. ಬಾಳೆಹಣ್ಣು ರಷ್ಯಾ ಆಮದು ಮಾಡಿಕೊಳ್ಳುವ ಪ್ರಮುಖ ಕೃಷಿ ಉತ್ಪನ್ನಗಳಲ್ಲಿ ಒಂದಾಗಿದ್ದು, ಪ್ರಸ್ತುತ ಲ್ಯಾಟಿನ್ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ.
ಭಾರತದ ಬಾಳೆಹಣ್ಣುಗಳನ್ನು ಇರಾನ್, ಇರಾಕ್, ಯುಎಎಇ, ಒಮನ್, ಉಜ್ಬೇಕಿಸ್ತಾನ್, ಸೌದಿ ಅರೇಬಿಯಾ, ನೇಪಾಳ, ಕತಾರ್, ಕುವೈಟ್, ಬಹ್ರೈನ್, ಅಫ್ಘಾನಿಸ್ತಾನ್ ಹಾಗೂ ಮಾಲ್ಡೀವ್ಸ್ ಗೆ ರಫ್ತು ಮಾಡಲಾಗುತ್ತಿದೆ. ಇದರ ಜೊತೆಗೆ ಯುಎಸ್ಎ, ರಷ್ಯಾ, ಜಪಾನ್, ಜರ್ಮನಿ, ಚೀನಾ, ನೆದರ್ಲ್ಯಾಂಡ್ಸ್, ಯುಕೆ ಹಾಗೂ ಫ್ರಾನ್ಸ್ ಗೆ ಕೂಡ ರಫ್ತು ಮಾಡಲು ಭಾರತಕ್ಕೆ ಸಾಕಷ್ಟು ಅವಕಾಶಗಳಿವೆ.