ಚೆನ್ನೈ: ಶಂಕರ ನೇತ್ರಾಲಯದ ಸಂಸ್ಥಾಪಕ, ಪದ್ಮವಿಭೂಷಣ ಪುರಸ್ಕೃತ ಡಾ.ಎಸ್.ಎಸ್.ಬದರಿನಾಥ್ ಇಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು, ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಡಾ.ಎಸ್.ಎಸ್.ಬದರಿನಾಥ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಕಂಬನಿ ಮಿಡಿದಿದ್ದಾರೆ.
ದೇಶದಲ್ಲಿಯೇ ಅತೀ ದೊಡ್ಡ ಚಾರಿಟೇಬಲ್ ಹಾಸ್ಪಿಟಲ್ಸ್ ‘ಶಂಕರ್ ನೇತ್ರಾಲಯ’ವನ್ನು ಚೆನ್ನೈನಲ್ಲಿ ಹುಟ್ಟು ಹಾಕಿದ ಹೆಗ್ಗಳಿಕೆ ಡಾ.ಎಸ್.ಎಸ್.ಬದರಿನಾಥ್ ಅವರದ್ದಾಗಿತ್ತು. ಡಾ.ಬದರಿನಾಥ್ ವಿದೇಶದಲ್ಲಿ ವಿದ್ಯಾಭ್ಯಾಸ ಮತ್ತು ಸಂಶೋಧನೆಗಳನ್ನು ಪೂರ್ಣಗೊಳಿಸಿದ ನಂತರ ಭಾರತಕ್ಕೆ ಬಂದು 1978ರಲ್ಲಿ ಲಾಭ ರಹಿತ ಜನಸೇವೆಯಲ ಚಾರಿಟೇಬಲ್ ಹುಟ್ಟು ಹಾಕಿದ್ದರು.
ಡಾ.ಬದರೀನಾಥ್ ಸೇವೆಯನ್ನು ಮೆಚ್ಚಿದ ಭಾರತ ಸರ್ಕಾರ 1983ರಲ್ಲಿ ಪದ್ಮಶ್ರೀ ಮತ್ತು 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು. ತಮಿಳುನಾಡು ಡಾ.ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯವು 1995 ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತ್ತು. ಡಾ.ಬದರಿನಾಥ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.