News Karnataka Kannada
Thursday, May 02 2024
ಆಂಧ್ರಪ್ರದೇಶ

ಜಿಲ್ಲೆಯ ಹೆಸರು ಬದಲಾವಣೆಗೆ ವಿರೋಧ: ಸಚಿವರ ನಿವಾಸಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ

Mangaluru: Accidental fire in car bonnet at Ivarnadu, no casualties
Photo Credit :

ಅಮರಾವತಿ: ಉದ್ರಿಕ್ತ ಪ್ರತಿಭಟನಾಕಾರರು ಆಂಧ್ರ ಪ್ರದೇಶದ ಸಾರಿಗೆ ಸಚಿವ ಪಿ.ವಿಶ್ವರೂಪು ಅವರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಹೊಸದಾಗಿ ರಚನೆಯಾಗಿರುವ ಕೋನಸೀಮ ಜಿಲ್ಲೆಯ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಪ್ರತಿಭಟನೆಯ ವೇಳೆ ಈ ಘಟನೆ ನಡೆದಿದೆ.

ಕೋನಸೀಮ ಜಿಲ್ಲೆಯನ್ನು ‘ಬಿ.ಆರ್‌.ಅಂಬೇಡ್ಕರ್‌ ಕೋನಸೀಮ’ ಎಂದು ಬದಲಾಯಿಸುವ ಪ್ರಸ್ತಾಪದ ವಿರುದ್ಧ ಅಮಲಾಪುರಂ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಅದರಿಂದ ಉದ್ರೇಕಗೊಂಡ ಗುಂಪು ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರಹಾಕಿದೆ.

ಕೆಲವು ರಾಜಕೀಯ ಪಕ್ಷಗಳು ಹಾಗೂ ಸಮಾಜ ಘಾತುಕ ಶಕ್ತಿಗಳು ಬೆಂಕಿ ಹಚ್ಚುವ ಮೂಲಕ ಹಿಂಸಾಚಾರ ನಡೆಸಲು ಪ್ರೇರೇಪಣೆ ನೀಡಿರುವುದಾಗಿ ಗೃಹ ಸಚಿವೆ ತಾನೇಟಿ ವನಿತಾ ಆರೋಪಿಸಿದ್ದಾರೆ. ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಸಚಿವ ವಿಶ್ವರೂಪು ಅವರ ನಿವಾಸ, ಕಚೇರಿ, ಪೊಲೀಸ್‌ ವಾಹನ ಹಾಗೂ ಶಿಕ್ಷಣ ಸಂಸ್ಥೆಯ ಬಸ್‌ವೊಂದಕ್ಕೆ ಬೆಂಕಿ ಹಚ್ಚಲಾಗಿದೆ. ವಿಶ್ವರೂಪು ಮತ್ತು ಅವರ ಕುಟುಂಬದ ಸದಸ್ಯರು ಪೊಲೀಸರ ರಕ್ಷಣೆಯಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲಾಗುತ್ತದೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವೆ ತಾನೇಟಿ ಹೇಳಿದ್ದಾರೆ.

ಪೂರ್ವ ಗೋದಾವರಿಯಿಂದ ಬೇರ್ಪಡಿಸಿ ಕೋನಸೀಮಾ ಜಿಲ್ಲೆಯನ್ನು ಏಪ್ರಿಲ್‌ 4ರಂದು ರಚಿಸಲಾಗಿದೆ. ಜಿಲ್ಲೆಯ ಹೆಸರನ್ನು ಬಿ.ಆರ್‌.ಅಂಬೇಡ್ಕರ್‌ ಕೋನಸೀಮ ಎಂದು ಬದಲಿಸುವ ಬಗ್ಗೆ ರಾಜ್ಯ ಸರ್ಕಾರವು ಪ್ರಸ್ತಾವಿತ ಅಧಿಸೂಚನೆ ಹೊರಡಿಸಿತ್ತು ಹಾಗೂ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ತಿಳಿಸಲಾಗಿತ್ತು.

ಕೋನಸೀಮ ಸಾಧನಾ ಸಮಿತಿಯು ಹೆಸರು ಬದಲಿಸುವ ಪ್ರಸ್ತಾಪವನ್ನು ವಿರೋಧಿಸಿತ್ತು. ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಸಮಿತಿಯು ಪ್ರತಿಭಟನೆ ಆಯೋಜಿಸಿ, ಕೋನಸೀಮ ಹೆಸರು ಉಳಿಸಿಕೊಳ್ಳುವಂತೆ ಆಗ್ರಹಿಸಿತ್ತು. ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳಿಂದಾಗಿ ಪ್ರತಿಭಟನಾಕಾರರು ಉದ್ರಿಕ್ತರಾಗಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು