ಹೈದರಾಬಾದ್: ಮನೆಯೊಳಗೇ ಮಲಗಿದ್ದ ಆತನಿಗೆ ಬೆಳ್ಳಂಬೆಳಗ್ಗೆ ತನ್ನ ಮಗಳು ಕೂಗಾಡುತ್ತಿದ್ದುದನ್ನು ಕೇಳಿ ಪಕ್ಕದ ಕೋಣೆಯನ್ನು ಹೊಕ್ಕು ನೋಡಿದಾಗ ತೀವ್ರ ಆಘಾತವಾಗುವಂಥ ದೃಶ್ಯ ಕಂಡು ಬಂದಿತ್ತು.
ಅಲ್ಲಿಗೆ ಆತನ ಹದಿನಾಲ್ಕು ವರ್ಷಗಳ ದಾಂಪತ್ಯ ದುರಂತ ಅಂತ್ಯ ಕಂಡಂತಾಗಿತ್ತು. ಅಂದಹಾಗೆ ಆತನ ಹೆಸರು ವೆಂಕಟೇಶ್. ತೆಲಂಗಾಣದ ಯಡಾದ್ರಿ ಭೊಂಗಿರ್ ಜಿಲ್ಲೆಯ ರಾಮನಗರ ಎಂಬಲ್ಲಿ ಹೆಂಡತಿ ಉಮಾರಾಣಿ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ನೆಲೆಸಿದ್ದ ಆತನಿಗೆ ಈಗ ಜೊತೆಯಾಗಿರುವುದು 8 ವರ್ಷದ ಮಗಳು ಮಾತ್ರ.
ಗುರುವಾರ ಬೆಳಗ್ಗೆ ಕೋಣೆಯೊಳಗಿಂದ ತನ್ನ ಮಗಳು ಜೋರಾಗಿ ಅಳುತ್ತಿರುವುದನ್ನು ಕೇಳಿ ಎಚ್ಚರಗೊಂಡ ವೆಂಕಟೇಶ್ ಬಾಗಿಲನ್ನು ತಟ್ಟಿದ್ದಾನೆ. ಆದರೆ ಎಷ್ಟು ಬಡಿದರೂ ಬಾಗಿಲನ್ನು ತೆರೆಯದ್ದರಿಂದ ಅದನ್ನು ಒಡೆದು ಒಳಹೊಕ್ಕವನಿಗೆ ತೀವ್ರ ಆಘಾತವಾಗುವಂಥ ದೃಶ್ಯ ಕಂಡುಬಂದಿತ್ತು. ಏಕೆಂದರೆ ತನ್ನ ಹೆಂಡತಿ ಹಾಗೂ ಮೂವರು ಹೆಣ್ಣು ಮಕ್ಕಳ ಪೈಕಿ ಅಲ್ಲಿ ಜೀವಂತ ಇದ್ದಿದ್ದು ಕಿರಿಯ ಮಗಳೊಬ್ಬಳು ಮಾತ್ರ.
ವೆಂಕಟೇಶ್ ಪತ್ನಿ ಉಮಾರಾಣಿ (32) ತನ್ನ ಮೂವರು ಹೆಣ್ಣು ಮಕ್ಕಳಾದ ಹರ್ಷಿಣಿ (13), ಲಕ್ಕಿ (11) ಮತ್ತು ಎಂಟು ವರ್ಷದ ಶೈನಿಗೆ ನೇಣು ಹಾಕಿದ್ದಲ್ಲದೆ ತಾನೂ ಕುಣಿಕೆಗೆ ಕೊರಳೊಡ್ಡಿದ್ದಳು. ಕೋಣೆಯೊಳಗಿದ್ದ ಕಬ್ಬಿಣದ ಬೀಮ್ವೊಂದಕ್ಕೆ ಇವರು ನೇಣು ಹಾಕಿಕೊಂಡಿದ್ದು, ಅದೃಷ್ಟವಶಾತ್ ನೇಣು ಹಾಕಲು ಬಳಸಿದ್ದ ಬಟ್ಟೆಯೊಂದರ ತುದಿ ಹರಿದುಹೋಗಿದ್ದರಿಂದ ಕೊನೆಯ ಮಗಳು ಉಳಿದುಕೊಂಡಿದ್ದಾಳೆ. ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬೆಳಗಿನ ಜಾವ ಉಮಾರಾಣಿ ಈ ಕೃತ್ಯಕ್ಕೆ ಮುಂದಾಗಿದ್ದಳು. ವೆಂಕಟೇಶ್ ಮದ್ಯವ್ಯಸನಿಯಾಗಿದ್ದು, ಹದಿನಾಲ್ಕು ವರ್ಷಗಳ ಹಿಂದೆ ಉಮಾರಾಣಿಯನ್ನು ಮದುವೆಯಾಗಿದ್ದ. ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಮಹಿಳೆ ಹೀಗೆ ಮಕ್ಕಳನ್ನೂ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಿರುವ ಪೊಲೀಸರು, ಇಬ್ಬರ ನಡುವಿನ ದಾಂಪತ್ಯಕಲಹವೂ ಕಾರಣವಿರಬಹುದೇ ಎಂಬ ನಿಟ್ಟಿನಲ್ಲಿ ತನಿಖೆಯನ್ನು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.