ಹೈದರಬಾದ್ : ಧಾರಾಕಾರ ಮಳೆ, ಪ್ರವಾಹದ ಪರಿಣಾಮ ಮೂವರು ಸಾವನ್ನಪ್ಪಿದ್ದು, 30 ಮಂದಿ ನಾಪತ್ತೆಯಾಗಿರುವ ಘಟನೆ ಶುಕ್ರವಾರ(ನವೆಂಬರ್ 19) ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ. ಅಣೆಕಟ್ಟಿನ ನೀರಿನ ಮಟ್ಟ ಮೀರಿ ಹರಿದಿದ್ದು ಹಲವಾರು ಹಳ್ಳಿಗಳು ಜಲಾವೃತವಾಗಿದೆ. ನಂದಾಲುರ್ ನಲ್ಲಿ ಸ್ವಾಮಿ ಆನಂದ ದೇವಸ್ಥಾನ ಮುಳುಗಡೆಯಾಗಿರುವುದಾಗಿ ವರದಿ ತಿಳಿಸಿದೆ.
ತಮಿಳುನಾಡು ಮತ್ತು ಆಂಧ್ರಪ್ರದೇಶದ ನಡುವೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದ ಪರಿಣಾಮ ಶುಕ್ರವಾರ ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಚೆಯ್ಯುರು ನದಿ ಉಕ್ಕಿ ಹರಿದ ಪರಿಣಾಮ ಹಲವಾರು ಹಳ್ಳಿಗಳು ಜಲಾವೃತಗೊಂಡಿದೆ.
ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ರಾಯಲಸೀಮಾ ಪ್ರದೇಶದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಮುನ್ನೆಚ್ಚರಿಕೆ ನೀಡಿತ್ತು ಎಂದು ವರದಿ ತಿಳಿಸಿದೆ.
ಭಾರೀ ಮಳೆಗೆ ತಿರುಪತಿ ಕಂಡು ಕೇಳರಿಯದ ಪ್ರವಾಹ ಸ್ಥಿತಿಗೆ ಕಂಗೆಟ್ಟು ಹೋಗಿದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ಸಾವಿರಾರು ಭಕ್ತರು ಪರದಾಡುವಂತಾಗಿದೆ. ತಿರುಮಲ ಬೆಟ್ಟದಲ್ಲಿರುವ ದೇವಸ್ಥಾನದ ನಾಲ್ಕು ರಸ್ತೆಗಳು ಪ್ರವಾಹದಿಂದ ಆವೃತ್ತವಾಗಿದ್ದು, ಭಕ್ತರು ಹರಸಾಹಸಪಡುತ್ತಿರುವ ವಿಡಿಯೋ ವೈರಲ್ ಆಗಿದೆ.