News Karnataka Kannada
Monday, April 29 2024
ದೇಶ

ಸಚಿವ ಸಂಪುಟದಲ್ಲಿ ಯುವಕರ ಪಡೆ ಕಟ್ಟಲು ಬಿಜೆಪಿ ಹೈಕಮಾಂಡ್‌ ಚಿಂತನೆ

Modi Shaw
Photo Credit :

ಬೆಂಗಳೂರು, ; ಸಚಿವ ಸಂಪುಟ ರಚನೆಯ ಕಾಲ ಸಮೀಪಿಸುತ್ತಿರುವ ಬೆನ್ನಲ್ಲೇ ಈ ಬಾರಿ ಬಿಜೆಪಿ ಬಹುತೇಕ ಹಿರಿಯ ನಾಯಕರಿಗೆ ಸ್ಥಾನ ನಿರಾಕರಿಸಿ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. , ಆ ಮೂಲಕ ಹೊಸ ಸರ್ಕಾರದಲ್ಲಿ ಯುವಕರ ಪಡೆಯನ್ನು ಸರ್ಕಾರದಲ್ಲಿ ನೆಲೆಗೊಳಿಸಿ ಯುವಕರ ಪಡೆಯ ಮೂಲಕ ಹಿಂದುತ್ವದ ಅಜೆಂಡಾ ಮುಂದಿಟ್ಟುಕೊಂಡು ಮುಂದಿನ ಚುನಾವಣೆಗೆ ಹೋದರೆ ಗೆಲುವು ಖಚಿತ ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಪಕ್ಷ ಹಾಗೂ ಸರ್ಕಾರದಲ್ಲಿ ಅಧಿಕಾರ ಅನುಭವಿಸಿ, ಈಗ ಮತದಾರರ ಕಣ್ಣಿಗೆ ಸವಕಲಾಗಿರುವ ನಾಯಕರಿಗೆ ಗೇಟ್ ಪಾಸ್ ಕೊಡಲು ನಿರ್ಧರಿಸಲಾಗಿದೆ. ಹೊಸ ಸರ್ಕಾರದಲ್ಲಿ 60 ವರ್ಷಗಳಿಗಿಂತ ಕಡಿಮೆ ಇರುವವರ ಸಂಖ್ಯೆ ಹೆಚ್ಚಾಗಿರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಂಘ ಪರಿವಾರದ ಪ್ರಯೋಗ ಶಾಲೆ ಎಂದೇ ಹೆಸರಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಿ, ಮುಂದಿನ ಚುನಾವಣೆಯನ್ನು ಎದುರಿಸಲು ಈಗಾಗಲೇ ಬ್ಲೂ ಪ್ರಿಂಟ್ ರೆಡಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಪ್ರಯೋಗ ಯಶಸ್ವಿಯಾಗಿದ್ದು, ಭವಿಷ್ಯದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಈ ದಾರಿ ಅನಿವಾರ್ಯ ಎಂದು ಬಿಜೆಪಿ ವರಿಷ್ಠರು ಭಾವಿಸಿದ್ದಾರೆ ಎನ್ನಲಾಗಿದೆ. ಸಿ.ಟಿ.ರವಿ, ಸುನೀಲ್ ಕುಮಾರ್, ಅರವಿಂದ ಬೆಲ್ಲದ್, ಮುರುಗೇಶ್ ನಿರಾಣಿ, ಬಸವನಗೌಡ ಪಾಟೀಲ್ ಯತ್ನಾಳ್ ತರದ ನಾಯಕರೇ ಹೊಸ ಸರ್ಕಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರಲಿದ್ದು, ಸಂಘ ಪರಿವಾರ ಕೆಲ ಕಾರಣಗಳಿಗಾಗಿ ಸೂಚಿಸುವ ಕೆಲವೇ ಹಿರಿ ತಲೆಗಳಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.
ಸಿ.ಟಿ.ರವಿ, ಸುನೀಲ್ ಕುಮಾರ್ ಜೋಡಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅದೇ ರೀತಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಯುವಕರನ್ನು ಸೆಳೆಯಬಲ್ಲ ಯುವಕರಿಗೆ ಆದ್ಯತೆ ನೀಡುವುದು ಅನಿವಾರ್ಯ ಎಂಬುದು ವರಿಷ್ಠರ ಲೆಕ್ಕಾಚಾರ. ಹಿರಿಯರಲ್ಲಿ ವಿ.ಸೋಮಣ್ಣ, ಆರ್.ಅಶೋಕ್ ಅವರಂತಹ ಕೆಲವರನ್ನು ಸಂಪುಟದಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿದೆ. ರಾಜಧಾನಿಯ ರಾಜಕೀಯದಲ್ಲಿ ಅಶೋಕ್ ಈಗಲೂ ಪ್ರಮುಖ ಪಾತ್ರ ವಹಿಸುವ ಶಕ್ತಿ ಹೊಂದಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಲಿಂಗಾಯತ ಮತದಾರರ ಮೇಲೆ ಸೋಮಣ್ಣ ಪ್ರಭಾವ ಬೀರಬಲ್ಲರು ಎಂಬುದು ವರಿಷ್ಠರ ಲೆಕ್ಕಾಚಾರ. ಅದೇ ರೀತಿ ಬಸನಗೌಡ ಪಾಟೀಲ್, ಅರವಿಂದ ಬೆಲ್ಲದ್ ಮತ್ತಿತರ ಯಂಗ್‍ಸ್ಟರ್‍ಗಳು ಮುಂಬೈ-ಕರ್ನಾಟಕ ಭಾಗದ ಯುವ ಮತದಾರರು ಅದರಲ್ಲೂ, ಮುಖ್ಯವಾಗಿ ಹಿಂದೂ ಮತದಾರರನ್ನು ಗಣನೀಯ ಪ್ರಮಾಣದಲ್ಲಿ ಸೆಳೆಯಬಲ್ಲರು ಎಂಬುದು ಸದ್ಯದ ಲೆಕ್ಕಾಚಾರ.ಒಂದು ಕಾಲದಲ್ಲಿ ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಂತಹ ನಾಯಕರಿದ್ದರು. ಇದಾದ ನಂತರ ದಿ. ಅನಂತಕುಮಾರ್, ಬಿ.ಎಸ್. ಯಡಿಯೂರಪ್ಪ, ಮತ್ತು ಕೆ.ಎಸ್. ಈಶ್ವರಪ್ಪ ಅವರು ರಾಜ್ಯ ಬಿಜೆಪಿಯ ಪ್ರಮುಖ ನಾಯಕರಾಗಿ ಬೆಳೆದು ನಿಂತರು. ಆದರೆ, ಈಗ ಹೊಸ ತಲೆಮಾರಿಗೆ ನಾಯಕತ್ವವನ್ನು ವರ್ಗಾಯಿಸುವುದು ಅನಿವಾರ್ಯವಾಗಿದ್ದು, ಅನುಭವಿಗಳು ಬೇಕು ಎಂಬ ಕಾರಣಕ್ಕಾಗಿ ಕೆಲವೇ ಕೆಲವರನ್ನು ಜತೆಗಿಟ್ಟುಕೊಂಡು ಉಳಿದ ಬಹುತೇಕರಿಗೆ ಮಾರ್ಗದರ್ಶಕರ ಸ್ಥಾನವನ್ನು ಕೊಡುವುದು ಅನಿವಾರ್ಯ ಎಂದು ವರಿಷ್ಠರು ಭಾವಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿರುವ ಯುವಕರನ್ನು ಗುರುತಿಸುವ ಕೆಲಸ ನಡೆದಿದ್ದು, ಯಾರು ಯಾವ್ಯಾವ ಭಾಗದಲ್ಲಿ ಪಕ್ಷಕ್ಕೆ ಟಾನಿಕ್ ಆಗಿ ಪರಿವರ್ತನೆಯಾಗಬಲ್ಲರು ಎಂದು ಲೆಕ್ಕ ಹಾಕಲಾಗುತ್ತಿದೆ. ಯಾವುದೇ ನಿರ್ದಿಷ್ಟ ಜಾತಿ, ಸಮುದಾಯಕ್ಕೆ ಮಣೆ ಹಾಕದೇ ಎಲ್ಲ ಜಾತಿ, ಸಮುದಾಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಿಂದುತ್ವದ ಕಾರ್ಡ್ ಅನ್ನು ಬಳಸಬೇಕು, ಆ ಮೂಲಕ ಸಹಕಾರಿ ಮತ ಬ್ಯಾಂಕ್ ಅನ್ನು ರಚಿಸಿಕೊಳ್ಳಬೇಕು ಎಂಬುದು ವರಿಷ್ಠರ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು