ಬೆಂಗಳೂರು ; ಯಡಿಯೂರಪ್ಪ ಅವರು ಸೋಮವಾರ ರಾಜೀನಾಮೆ ನೀಡಿದ್ದು ಮುಂದಿನ ಮುಖ್ಯ ಮಂತ್ರಿ ಯಾರಾಗಬೇಕು ಎಂಬ ಆಯ್ಕೆ ನಡೆಸಲು ಹೈ ಕಮಾಂಡ್ ಮುಂದಾಗಿದ್ದು, ಇದೇ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತಾ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿದೆ. ಸಂಸತ್ ಭವನದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದ್ದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಪ್ರಹ್ಲಾದ್ ಜೋಶಿ ಕೂಡ ಭಾಗಿಯಾಗಿದ್ದಾರೆ.
ಈಗಾಗಲೇ ಸಿಎಂ ರೇಸ್ನಲ್ಲಿ ಹಲವು ನಾಯಕರು ಇದ್ದು, ಅಂತಿಮವಾಗಿ ಯಾರಿಗೆ ಪಟ್ಟ ಕಟ್ಟಬೇಕು ಎಂಬ ಕುರಿತು ಚರ್ಚೆ ನಡೆಯುತ್ತಲೇ ಇದೆ. 2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಆಯ್ಕೆ ನಡೆಯಬೇಕಿರುವ ಹಿನ್ನಲೆ ಈ ಕುರಿತು ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದೇ ವೇಳೆ ಮುಂದಿನ ಮುಖ್ಯಮಂತ್ರಿ ಆಯ್ಕೆಗೂ ಮುನ್ನ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲು ಕೂಡ ಹೈ ಕಮಾಂಡ್ ತೀರ್ಮಾನಿಸಿದೆ. ಇದೇ ಕಾರಣಕ್ಕೆ ರಾಜ್ಯಕ್ಕೆ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್ ಕಳುಹಿಸಲು ನಿರ್ಧಾರಿಸಲಾಗಿದೆ. ರಾಜ್ಯಕ್ಕೆ ಆಗಮಿಸಲಿರುವ ಧರ್ಮೇಂದ್ರ ಪ್ರಧಾನ್ ರಾಜ್ಯ ಶಾಸಕಾಂಗ್ರ ಪಕ್ಷ ನಡೆಸಲು ತೀರ್ಮಾನಿಸಿ, ಅಲಲಿ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಲಿದ್ದಾರೆ. ಮುಂದಿನ ಸಿಎಂ ಆಯ್ಕೆ ವೇಳೆ ಶಾಸಕಾರ ಸಹಕಾರವೂ ಅಗತ್ಯವಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಸಿಎಂ ಯಾರು ಎಂಬ ಕುರಿತು ಹೈ ಕಮಾಂಡ್ ನಿರ್ಧಾರ ಮಾಡಿದ್ದು, ಈ ಕುರಿತು ಚರ್ಚೆಗೆ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ಈ ಶಾಸಕಾಂಗ ಸಭೆಯಲ್ಲಿ ಯಾರು ಸಿಎಂ ಎಂಬ ಕುರಿತು ತಿಳಿಸಲಿದ್ದು, ಅವರಿಗೆ ಎಲ್ಲಾ ಶಾಸಕರು ಬೆಂಬಲ ನೀಡಿ, ಸಹಕಾರ ನೀಡುವಂತೆ ತಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಳೆ ಧರ್ಮೇಂದ್ರ ಪ್ರಧಾನ್ ರಾಜ್ಯಕ್ಕೆ ಆಗಮಿಸಲಿದ್ದು, ಪಕ್ಷದ ಬೆಳವಣಿಗೆ ಕುರಿತು ರಾಜ್ಯದ ಪ್ರಮುಖ ನಾಯಕರ ಬಳಿ ಚರ್ಚೆ ನಡೆಸಲಿದ್ದಾರೆ. ಬಳಿಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲಾ ನಾಯಕರ ಬಳಿ ಚರ್ಚಿಸಿ, ಹೈ ಕಮಾಂಡ್ ಆಯ್ಕೆ ಮಾಡಿದ ಸಿಎಂ ಅಭ್ಯರ್ಥಿಗೆ ಬೆಂಬಲಿಸುವಂತೆ ಸೂಚನೆ ನೀಡಲಾಗುವುದು. ಇನ್ನುಳಿದ ಎರಡು ವರ್ಷಗಳ ಕಾಲ ಆಯ್ಕೆಯಾದ ಸಿ ಎಂ ಅಭ್ಯರ್ಥಿಗೆ ಬೆಂಬಲಿ, ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವಂತೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗುವುದು ಎನ್ನಲಾಗಿದೆ.ಮತ್ತೊಂದು ಉನ್ನತ ಮೂಲದ ಪ್ರಕಾರ ಹೈ ಕಮಾಂಡ್ ಸಾಕಷ್ಟು ಅಳೆದು ತೂಗಿ ಲಿಂಗಾಯತರಿಗೆ ಸಿಎಂ ಪಟ್ಟ ಕಟ್ಟಲು ನಿರ್ಧರಿಸಿದೆಯಂತೆ. ಹೈಕಮಾಂಡ್ನ ಮನಸ್ಸಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ, ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್ ಮತ್ತು ಲಕ್ಷ್ಮಣ ಸವದಿ ಅವರ ಹೆಸರುಗಳಿದ್ದು, ಪರಿಶೀಲನೆಯಾಗುತ್ತಿದೆ ಎನ್ನಲಾಗಿದೆ.