ಹೊಸದಿಲ್ಲಿ: ಕಳೆದ ಆರೇಳು ವರ್ಷಗಳ ಹಿಂದೆ ಬ್ಯಾಂಕಿಂಗ್, ಪಿಂಚಣಿ, ವಿಮೆ ಎಲ್ಲದರಲ್ಲಿ ಎಕ್ಸ್ಕ್ಲೂಸಿವ್ ಕ್ಲಬ್ನಂತಿದ್ದ ಭಾರತ ಇಂದು ಡಿಜಿಟಲ್ ವಹಿವಾಟಿನಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿದೆ. ಆರ್ಬಿಐನ ನಿರ್ಧಾರಗಳು ಸರಕಾರ ತೆಗೆದುಕೊಳ್ಳುತ್ತಿರುವ ದೊಡ್ಡ ನಿರ್ಧಾರಗಳ ಪರಿಣಾಮ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಶುಕ್ರವಾರ ರಿಸರ್ವ್ಬ್ಯಾಂಕ್ ಆಫ್ ಇಂಡಿಯಾದ ಎರಡು ವಿಶೇಷ ಯೋಜನೆಗಳಿಗೆ ಚಾಲನೆ ನೀಡಿದರು. ಬ್ಯಾಂಕ್ ಶಾಖೆಯಿಲ್ಲ, ಸಿಬ್ಬಂದಿ ಇಲ್ಲ, ಇಂಟರ್ನೆಟ್ ಇಲ್ಲ, ಅರಿವು ಇಲ್ಲ ಎಂಬ ವಾದಗಳೇ ಹೆಚ್ಚಾಗಿತ್ತು.
ದೇಶದ ಸಾಮಾನ್ಯ ನಾಗರಿಕರು, ಬಡ ಕುಟುಂಬಗಳು, ರೈತರು, ಸಣ್ಣ ವ್ಯಾಪಾರಿಗಳು-ಉದ್ಯಮಿಗಳು, ಮಹಿಳೆಯರು, ದಲಿತರು – ವಂಚಿತರು – ಹಿಂದುಳಿದವರೆಲ್ಲರಿಗೂ ಈ ಸೌಲಭ್ಯಗಳು ದೂರವಾಗಿದ್ದವು. ಆದರೆ ಯುಪಿಐನಿಂದಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಡಿಜಿಟಲ್ ವಹಿವಾಟಿನ ವಿಷಯದಲ್ಲಿ ಭಾರತ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿದೆ. ಕೇವಲ ಏಳು ವರ್ಷಗಳಲ್ಲಿ ಡಿಜಿಟಲ್ ವಹಿವಾಟಿನ ವಿಷಯದಲ್ಲಿ ಭಾರತ 19 ಬಾರಿ ಜಿಗಿದಿದೆ. ಇಂದು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು 24 ತಾಸುಗಳು, 7 ದಿನಗಳು ಮತ್ತು 12 ತಿಂಗಳುಗಳು ಯಾವುದೇ ಸಮಯದಲ್ಲಿ, ದೇಶದಲ್ಲಿ ಎಲ್ಲಿಯಾದರೂ ಕಾರ್ಯನಿರ್ವಹಿಸುತ್ತದೆ ಎಂದು ಶ್ಲಾಘಿಸಿದರು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಅವಧಿ, 21ನೇ ಶತಮಾನದ ಈ ದಶಕವು ದೇಶದ ಅಭಿವೃದ್ಧಿಗೆ ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಬಿಐ ಪಾತ್ರವೂ ಬಹಳ ದೊಡ್ಡದು. ಆರ್ಬಿಐ ತಂಡವು ದೇಶದ ನಿರೀಕ್ಷೆಗಳನ್ನು ಪೂರೈಸುತ್ತದೆಂಬ ಖಾತ್ರಿಯಿದೆ. ರಿಟೈಲ್ ಡೈರೆಕ್ಟ್ ಸ್ಕೀಮ್ ದೇಶದ ಸಣ್ಣ ಹೂಡಿಕೆದಾರರಿಗೆ ಸರಕಾರಿ ಭದ್ರತೆಗಳಲ್ಲಿ ಹೂಡಿಕೆಯ ಸರಳ ಮತ್ತು ಸುರಕ್ಷಿತ ಮಾಧ್ಯಮ ನೀಡಿದೆ. ಅದೇ ರೀತಿ, ಇಂದು ಏಕೀಕೃತ ಓಂಬುಡ್ಸ್ಮನ್ ಯೋಜನೆಯೊಂದಿಗೆ ಬ್ಯಾಂಕಿಂಗ್ ವಲಯದಲ್ಲಿ ಒಂದು ರಾಷ್ಟ್ರ, ಒಂದು ಒಂಬುಡ್ಸ್ಮನ್ ವ್ಯವಸ್ಥೆ ರೂಪುಗೊಂಡಿದೆ ಎಂದರು.
ಇಂದು ಪ್ರಾರಂಭಿಸಲಾದ ಎರಡು ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಮತ್ತು ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ, ಹೂಡಿಕೆದಾರರಿಗೆ ಹೆಚ್ಚು ಸುರಕ್ಷಿತವಾಗಿದೆ. ಕಳೆದ ಏಳು ವರ್ಷಗಳಲ್ಲಿ ಎನ್ಪಿಎಗಳನ್ನು ಪಾರದರ್ಶಕತೆಯೊಂದಿಗೆ ಗುರುತಿಸಲಾಗಿದೆ. ಎಲ್ಲರ ಗಮನವು ನಿರ್ಣಯ ಮತ್ತು ಚೇತರಿಕೆಯ ಮೇಲೆ ಕೇಂದ್ರೀಕೃತವಾಗಿತ್ತು. ಸಾರ್ವಜನಿಕ ವಲಯದ ಬ್ಯಾಂಕುಗಳು ಮರುಬಂಡವಾಳೀಕರಣಗೊಂಡವು ಎಂದು ಪ್ರಧಾನಿ ವಿವರಿಸಿದರು.
ಹಣಕಾಸು ವ್ಯವಸ್ಥೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದರ ನಂತರ ಒಂದರಂತೆ ಸುಧಾರಣೆಗಳನ್ನು ಕೈಗೊಳ್ಳಲಾಯಿತು. ಬ್ಯಾಂಕಿಂಗ್ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಸಹಕಾರಿ ಬ್ಯಾಂಕ್ಗಳನ್ನೂ ಆರ್ಬಿಐ ವ್ಯಾಪ್ತಿಗೆ ತರಲಾಯಿತು. ಇದರಿಂದಾಗಿ ಈ ಬ್ಯಾಂಕ್ಗಳ ಆಡಳಿತವೂ ಸುಧಾರಿಸುತ್ತಿದೆ ಮತ್ತು ಲಕ್ಷಾಂತರ ಠೇವಣಿದಾರರಲ್ಲಿಯೂ ಈ ವ್ಯವಸ್ಥೆಯ ಮೇಲಿನ ನಂಬಿಕೆ ಬಲವಾಗುತ್ತಿದೆ ಎಂದರು.
ನಾವು ದೇಶದ ನಾಗರಿಕರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಮತ್ತು ಹೂಡಿಕೆದಾರರ ನಂಬಿಕೆಯನ್ನು ನಿರಂತರವಾಗಿ ಬಲಪಡಿಸಬೇಕು. ಸಂವೇದನಾಶೀಲ ಮತ್ತು ಹೂಡಿಕೆದಾರ ಸ್ನೇಹಿ ತಾಣವಾಗಿ ಭಾರತದ ಹೊಸ ಗುರುತನ್ನು ಬಲಪಡಿಸುವುದನ್ನು ಆರ್ಬಿಐ ಮುಂದುವರಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.