ನವದೆಹಲಿ : ಸಣ್ಣ ಹಿಡುವಳಿದಾರರಿಗೆ ಅನಕೂಲವಾಗಲೆಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನಾಳೆ ರೈತರ ಬ್ಯಾಂಕ್ ಖಾತೆಗಳಿಗೆ 9 ನೇ ಕಂತಿನ ಎರಡು ಸಾವಿರ ರೂ. ಹಣ ಜಮೆಯಾಗಲಿದೆ.
ಸರಿಸುಮಾರು 9 ಕೋಟಿ 75 ಲಕ್ಷ ರೈತರಿಗೆ ನಾಳೆ ಎರಡು ಸಾವಿರ ರೂ ಜಮೆಯಾಗಲಿದೆ. ಕೇಂದ್ರ ಸರ್ಕಾರ ವಾರ್ಷಿಕವಾಗಿ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2 ಸಾವಿರದಂತೆ ಒಟ್ಟು ಆರು ಸಾವಿರ ರೂಪಾಯಿಗಳನ್ನು ನೇರ ವರ್ಗಾವಣೆ ಮಾಡುತ್ತಿದೆ.
ಪ್ರಧಾನಮಂತ್ರಿ ಕಚೇರಿ ಮೂಲಗಳ ಪ್ರಕಾರ ನಾಳೆ ದೇಶದ 9 ಕೋಟಿ 75 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ,19 ಸಾವಿರದ 500 ಕೋಟಿ ರೂಪಾಯಿ ಜಮೆ ಮಾಡಲಾಗುವುದು. .
ಸಾಮಾನ್ಯವಾಗಿ ಮೊದಲ ಕಂತು ಏಪ್ರಿಲ್-ಜುಲೈ ನಡುವೆ, ಆಗಸ್ಟ್ ನಿಂದ ನವೆಂಬರ್ ವರೆಗೆ ಎರಡನೇ ಕಂತು ಮತ್ತು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಮೂರನೇ ಕಂತಿನ ಹಣ ನೀಡಲಾಗುತ್ತದೆ .
2021ರ ಮೇ 14 ರಂದು 8ನೇ ಕಂತಿನ ಹಣ ಸಂದಾಯವಾಗಿತ್ತು. ನಾಳೆ ಪ್ರಧಾನಿ ಮೋದಿ ಅವರು ರೈತರ ಖಾತೆಗೆ ಹಣ ಜಮೆ ಮಾಡುವುದಲ್ಲದೇ ಆಯ್ದ ರೈತರ ಜೊತೆಗೆ ಸಂವಾದ ನಡೆಸಲಿದ್ದಾರೆ, ಈ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಹ ಭಾಗಿಯಾಗಲಿದ್ದಾರೆ ಎಂದು ಪಿಎಂ ಕಚೇರಿ ಮೂಲಗಳು ತಿಳಿಸಿವೆ.