ದೆಹಲಿ : ಟೋಕಿಯೊ ಪ್ಯಾರಾಲಿಂಪಿಕ್ನಲ್ಲಿ ಭಾರತ ಪದಕಗಳ ಬೇಟೆ ಭರ್ಜರಿಯಾಗಿ ನಡೆಯುತ್ತಿದೆ. ಪುರುಷರ ಜಾವೆಲಿನ್ ಥ್ರೋ ಅಂತಿಮ ಸ್ಪರ್ಧೆಯಲ್ಲಿ ಭಾರತದ ದೇವೇಂದ್ರ ಜಜರಿಯಾ ಬೆಳ್ಳಿ ಪದಕ ಗೆದ್ದಿದ್ದು, ಸುಂದರ್ ಸಿಂಗ್ ಗುರ್ಜಾರ್ ಕಂಚಿನ ಪದಕ ಗೆದ್ದಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ದೇವೇಂದ್ರ ಜಜರಿಯಾ ಅವರಿಂದ ಅದ್ಭುತ ಸಾಧನೆ. ನಮ್ಮ ಅತ್ಯಂತ ಅನುಭವಿ ಕ್ರೀಡಾಪಟುಗಳಲ್ಲಿ ನೀವು ಒಬ್ಬರು. ದೇವೇಂದ್ರ ಅವರು ಭಾರತವನ್ನು ನಿರಂತರವಾಗಿ ಹೆಮ್ಮೆ ಪಡಿಸುತ್ತಿದ್ದಾರೆ. ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ’ ಎಂದಿದ್ದಾರೆ.
‘ಸುಂದರ್ ಸಿಂಗ್ ಗುರ್ಜಾರ್ ಗೆದ್ದಿರುವ ಕಂಚಿನ ಪದಕದಿಂದ ಭಾರತವು ಹರ್ಷಿತವಾಗಿದೆ. ಅವರು ಗಮನಾರ್ಹ ಧೈರ್ಯ ಮತ್ತು ಸಮರ್ಪಣೆಯನ್ನು ತೋರಿಸಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ
ಪುರುಷರ ಜಾವೆಲಿನ್ ಥ್ರೋ ಎಫ್ 46 ಫೈನಲ್ ವಿಭಾಗದಲ್ಲಿ ದೇವೇಂದ್ರ 64.35 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿಗೆ ಮುತ್ತಿಕ್ಕಿದ್ದಾರೆ. ಇದರ ಜೊತೆಗೆ ಸುಂದರ್ ಸಿಂಗ್ ಗುರ್ಜರ್ 64.01 ಮೀಟರ್ ದೂರ ಜಾವೆಲಿನ್ ಎಸೆದು ಕಂಚಿನ ಪದಕ ಗೆದ್ದಿದ್ದಾರೆ.