ನವದೆಹಲಿ : ಅರ್ಚಕರನ್ನು ದೇವಸ್ಥಾನಕ್ಕೆ0ದು ನೀಡಿದ ಭೂಮಿಯ ಮಾಲಿಕನೆಂದು ಪರಿಗಣಿಸಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ದೇವಸ್ಥಾನದ ದೇವರೇ ಆಯಾ ಭೂಮಿಗೆ ಮಾಲಿಕನಾಗಿರುತ್ತಾನೆ ಎಂದು ಸ್ಪಷ್ಟವಾಗಿ ಹೇಳಿದೆ. ಅರ್ಚಕರು ದೇವಸ್ಥಾನದ ಭೂಮಿಯನ್ನು ನಿರ್ವಹಣೆ ಮಾಡುವುದಕ್ಕಾಗಿ ಮಾತ್ರ ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳಬಹುದು ಎಂದೂ ಅದು ತಿಳಿಸಿದೆ.
ದೇವಸ್ಥಾನದ ಭೂಮಿಗೆ ಸಂಬಂಧಿಸಿದಂತೆ ಕಂದಾಯ ದಾಖಲೆಗಳ ಮಾಲಿಕತ್ವದ ಕಾಲಂನಲ್ಲಿ ದೇವರ ಹೆಸರನ್ನೇ ಬರೆಯಬೇಕು ಎಂದು ಮಧ್ಯಪ್ರದೇಶದ ಪ್ರಕರಣವೊಂದರಲ್ಲಿ ಸೋಮವಾರ ಈ ಆದೇಶ ನೀಡಿರುವ ಸುಪ್ರೀಂಕೋರ್ಟ್ನ ನ್ಯಾ. ಹೇಮಂತ್ ಗುಪ್ತಾ ಮತ್ತು ಎ.ಎಸ್.ಬೋಪಣ್ಣ ಅವರ ಪೀಠ ಆದೇಶಿಸಿದೆ.
ಅರ್ಚಕರ ಹೆಸರನ್ನಾಗಲೀ, ಜಿಲ್ಲಾಧಿಕಾರಿಯ ಹೆಸರನ್ನಾಗಲೀ ಅಥವಾ ಯಾರು ಆ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾರೋ ಅವರ ಹೆಸರನ್ನಾಗಲೀ ಬರೆಯಬಾರದು. ಏಕೆಂದರೆ ಆ ಜಾಗದ ಕಾನೂನಾತ್ಮಕ ಮಾಲಿಕ ದೇವರೇ ಆಗಿರುತ್ತಾನೆ. ಭೂಮಿಯ ನಿರ್ವಹಣೆಯ ಜವಾಬ್ದಾರ ಕೂಡ ದೇವರೇ ಆಗಿದ್ದು, ಆತನ ಪರವಾಗಿ ಅದನ್ನು ಅರ್ಚಕರು, ಮ್ಯಾನೇಜರ್ಗಳು ಅಥವಾ ಇತರ ಸೇವಾಕರ್ತರು ನೋಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ಮಾಲಿಕತ್ವದ ಕಾಲಂನಲ್ಲಿ ಅರ್ಚಕರು, ಮ್ಯಾನೇಜರ್ ಅಥವಾ ಸೇವಾಕರ್ತರ ಹೆಸರು ಬರೆಯುವ ಅಗತ್ಯವಿಲ್ಲ’ ಎಂದು ತಿಳಿಸಿದೆ.