ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಮಾತೆ ಮೇರಿ ಹುಟ್ಟುಹಬ್ಬವನ್ನು ತೆನೆಹಬ್ಬವಾಗಿ ಆಚರಿಸುವುದು ಸಂಪ್ರದಾಯ. ಇಲ್ಲಿನ ಕ್ರಿಶ್ಚಿಯನ್ ಧರ್ಮಿಯರು ಮಾತೆ ಮೇರಿ ಹುಟ್ಟುಹಬ್ಬವನ್ನು ತೆನೆಹಬ್ಬವಾಗಿ ಆಚರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಚರ್ಚ್ಗಳಲ್ಲಿ ಬೆಳಗ್ಗೆಯಿಂದಲೇ ಬಲಿಪೂಜೆ ನಡೆಸುವ ಮೂಲಕ ಮಾತೆ ಮೇರಿಯನ್ನು ಆರಾಧಿಸಲಾಯಿತು.
ಮಂಗಳೂರಿನ ರೊಸೊರಿಯೋ ಕೆಥೆಡ್ರಲ್ ಚರ್ಚ್ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ಸಾನ ನೇತೃತ್ವದಲ್ಲಿ ಬಲಿಪೂಜೆ ನೆರವೇರಿತು. ಮಂಗಳೂರಿನಲ್ಲಿ ಕ್ರಿಶ್ಚಿಯನ್ ಬಾಂಧವರಿಂದ ತೆನೆ ಹಬ್ಬ ಆಚರಣೆ, ಕರಾವಳಿಯಲ್ಲಿ ಮಾತೆ ಮೇರಿ ಹಬ್ಬವನ್ನು ತೆನೆ ಹಬ್ಬವಾಗಿ ಆಚರಿಸುವ ಕ್ರಿಶ್ಚಿಯನ್ ಬಂಧುಗಳು ಬಲಿಪೂಜೆಯ ಬಳಿಕ ನೀಡಲಾಗುವ ತೆನೆ ಮತ್ತು ಕಬ್ಬಿನೊಂದಿಗೆ ಮನೆಗೆ ತೆರಳುತ್ತಾರೆ. ಆ ಬಳಿಕ ಹೊಸ ತೆನೆಗಳ ಅಡುಗೆ ಸೇವಿಸಿ ಸಂಭ್ರಮಿಸುತ್ತಾರೆ.
ಈ ದಿನ ಮಾಂಸಹಾರ ನಿಷಿದ್ಧವಾಗಿದ್ದು, ವಿವಿಧ ತರಕಾರಿಗಳಿಂದ ಮಾಡಿದ ಅಡುಗೆ ಸೇವಿಸಿ ಮೇರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.