ನವದೆಹಲಿ: ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಇನ್ನು ಮುಂದೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಟೋಕಿಯೊ ಒಲಂಪಿಕ್ಸ್ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡ ಅಮೋಘ ಸಾಧನೆ ಮಾಡಿದ ಬೆನ್ನಲ್ಲೇ ಹಾಕಿಯ ದಂತಕತೆಯಾಗಿರುವ ಮೇಜರ್ ಧ್ಯಾನ್ಚಂದ್ ಅವರಿಗೆ ಸರ್ಕಾರ ಗೌರವ ಸಲ್ಲಿಸಿದೆ.
ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಇಡುವಂತೆ ಅನೇಕ ನಾಗರಿಕರಿಂದ ಮನವಿಗಳು ಬಂದಿವೆ. ಆ ಅಭಿಪ್ರಾಯಗಳಿಗಾಗಿ ಅವರನ್ನು ಗೌರವಿಸುತ್ತೇನೆ. ಅವರ ಭಾವನೆಗಳನ್ನು ಗೌರವಿಸಿ ಪ್ರಶಸ್ತಿಯ ಹೆಸರನ್ನು ಇನ್ನು ಮುಂದೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಎಂದು ಕರೆಯಲಾಗುವುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತಕ್ಕೆ ಗೌರವ ತಂದುಕೊಟ್ಟ ಮತ್ತು ದೇಶದ ಹೆಮ್ಮೆಯ ಕ್ರೀಡಾಪಟುಗಳಲ್ಲಿ ಮೇಜರ್ ಧ್ಯಾನ್ ಚಂದ್ ಅಗ್ರಗಣ್ಯರು. ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಧ್ಯಾನ್ ಚಂದ್ ಅವರ ಹೆಸರನ್ನು ಇಡುವುದು ಸೂಕ್ತವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.