ದೆಹಲಿ : ಅಡುಗೆ ಖಾದ್ಯ ತೈಲ ಬೆಲೆ ಏರಿಕೆ ಆದ ಹಿನ್ನೆಲೆಯಲ್ಲಿ ಪಾಮ್ ಆಯಿಲ್, ಸೋಯಾ ಆಯಿಲ್ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ಕಸ್ಟಮ್ ಸುಂಕವನ್ನು ಸರ್ಕಾರವು ಕಡಿತಗೊಳಿಸಿದ್ದು, ಖಾದ್ಯ ತೈಲ ಬೆಲೆಗಳ ಬೆಲೆ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಖಾದ್ಯ ತೈಲದ ಮೇಲೆ ಕಸ್ಟಮ್ ಸುಂಕ ಕಡಿತ ಸಂಬಂಧ ಹೊರಡಿಸಿರುವ ನೋಟಿಫಿಕೇಷನ್ ಇಂದಿನಿಂದಲೇ ಜಾರಿಯಾಗಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಕಚ್ಚಾ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ತೆರಿಗೆಯನ್ನು ಶೇಕಡಾ 10 ರಿಂದ 2.5 ಕ್ಕೆ ಇಳಿಸಲಾಗಿದೆ. ಕಚ್ಚಾ ಸೋಯಾಯಿಲ್ ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆಯನ್ನು ಶೇ 7.5 ರಿಂದ 2.5 ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಸ್ಟಮ್ ಸುಂಕ ಇಳಿಕೆಯೊಂದಿ ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಯಿಲ್, ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆ ಶೇ. 24.75ರಷ್ಟು ಇಳಿಕೆಯಾಗಲಿದೆ. ಆದರೆ ಸಂಸ್ಕರಿಸಿದ ತಾಳೆ ಎಣ್ಣೆ, ಸೋಯಾಯಿಲ್ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆ ಶೇ.35.75ರಷ್ಟಾಗಲಿದೆ. ಚಿಲ್ಲರೆ ಬೆಲೆಯಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆಯಲ್ಲಿ 4 – 5 ರೂಪಾಯಿಗಳಷ್ಟು ಕಡಿಮೆಯಾಗಬಹುದು. ಸರ್ಕಾರವು ಸಾಸಿವೆ ಎಣ್ಣೆಯ ಮೇಲಿನ ಆಮದು ಸುಂಕವನ್ನು ತಗ್ಗಿಸಬೇಕು ಎಂದು ದ್ರಾವಕ ಹೊರ ತೆಗೆಯುವವರ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಬಿವಿ ಮೆಹ್ತಾ ತಿಳಿಸಿದ್ದಾರೆ.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಆಗುವುದು ಕಷ್ಟ. ಭಾರತವು ಆಮದು ಸುಂಕದಲ್ಲಿ ಇಳಿಕೆ ಆಗಿರುವುದರಿಂದ ಲೀಟರ್ಗೆ 2ರಿಂದ 3 ರೂಪಾಯಿ ಬೆಲೆ ಇಳಿದಿದೆ. ಸರ್ಕಾರವು ಸಾಸಿವೆ ಎಣ್ಣೆ ಮೇಲಿನ ಆಮದು ಸುಂಕವನ್ನೂ ಇಳಿಸಬೇಕಿತ್ತು. ಆಗ ಅದರ ಬೆಲೆ ಕೂಡ ಕಡಿಮೆ ಆಗುತ್ತಿತ್ತು ಎಂದು ಸೇರಿಸಲಾಗಿದೆ. ಕಳೆದ ಕೆಲವು ತಿಂಗಳಿಂದ ಕೇಂದ್ರದಿಂದ ವಿವಿಧ ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ ಮಾಡುವ ಉದ್ದೇಶಕ್ಕೆ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ. ಜತೆಗೆ ಖಾದ್ಯ ತೈಲಗಳು, ಎಣ್ಣೆಬೀಜಗಳ ದಾಸ್ತಾನಿನ ಬಗ್ಗೆ ಸಗಟು ಮಾರಾಟಗಾರರು, ಮಿಲ್ಲರ್ಗಳು, ರಿಫೈನರ್ಗಳು ಮತ್ತು ಸ್ಟಾಕಿಸ್ಟ್ಗಳಿಂದ ಮಾಹಿತಿ ಕಲೆ ಹಾಕುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ. 11,040 ಕೋಟಿ ರೂಪಾಯಿ ತಾಳೆ ಎಣ್ಣೆ ಮಿಷನ್ ಕೂಡ ಘೋಷಣೆ ಮಾಡಲಾಗಿದೆ