ನವದೆಹಲಿ: ಕೋವಿಡ್–19 ಮೂರನೇ ಅಲೆಯ ಸಂದರ್ಭದಲ್ಲಿ ಕರ್ನಾಟಕ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿತರಾದ ಮಕ್ಕಳ ಸಂಖ್ಯೆಗಿಂತಲೂ ಈ ಬಾರಿ ಏಳು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಬೆಂಗಳೂರಿನ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ವಿವಿಧ ಮಾದರಿ ವಿಧಾನಗಳ ಆಧಾರದ ಮೇಲೆ ತಜ್ಞರು ಈ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ಸಾರ್ವನಿಕ ಆರೋಗ್ಯ ಗಳ ತಜ್ಞರು ಈ ಅಧ್ಯಯನವನ್ನು ಕೈಗೊಂಡಿ ದ್ದಾರೆ. ಪ್ರಮುಖವಾಗಿ ಕರ್ನಾಟಕ ಕೇಂದ್ರೀಕೃತವಾಗಿ ಈ ಅಧ್ಯಯನ ಕೈಗೊಳ್ಳಲಾಗಿದೆ.
ಈ ಅಧ್ಯಯನವನ್ನು ಜನರಲ್ಲಿ ಭಯ ಮೂಡಿಸುವ ಉದ್ದೇಶದಿಂದ ಕೈಗೊಂಡಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಸಿದ್ಧತೆಗಳನ್ನು ಕೈಗೊಳ್ಳುವ ಉದ್ದೇಶದಿಂದ ಅಧ್ಯಯನ ಮಾಡ ಲಾಗಿದೆ. ಕೋವಿಡ್–19 ಸೋಂಕಿಗೆ ಒಳಗಾದರೂ ಬಹುತೇಕ ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇರುವುದಿಲ್ಲ. ಸರಾಸರಿ ಆಧಾರದ ಮೇಲೆ ಏಳು ಪಟ್ಟು ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇದು ಮೂರರಿಂದ ಹತ್ತು ಪಟ್ಟು ಸಹ ಹೆಚ್ಚಾಗಬಹುದು ಎಂದು ಸಾಂಕ್ರಾಮಿಕ ಕಾಯಿಲೆಗಳ ತಜ್ಞ ಡಾ.ಗಿರಿಧರ ಬಾಬು ವಿವರಿಸಿದ್ದಾರೆ.
ಈಗ ನಡೆಸುತ್ತಿರುವ ಲಸಿಕಾ ಅಭಿಯಾನವನ್ನು ಮತ್ತಷ್ಟು ತ್ವರಿತಗೊಳಿಸಬೇಕು ಮತ್ತು ಕೋವಿಡ್–19 ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಮಾತ್ರ ಮೂರನೇ ಅಲೆಯನ್ನು ತಡೆಯಬಹುದು ಎಂದು ಅವರು ವಿವರಿಸಿದ್ದಾರೆ.