ಬಿಜೆಪಿ ರಾಷ್ಟ್ರಾದ್ಯಂತ ಇಂದಿನಿಂದ ಏಳು ದಿನಗಳ ಕಾಲ ಉತ್ತಮ ಆಡಳಿತ ವಾರವನ್ನು( good governance) ಆಚರಿಸಲಿದೆ. ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹಾರ ಮಾಡಿ ಉತ್ತಮ ಸೇವೆ ನೀಡುವ ಉದ್ದೇಶ ಸಪ್ತಾಹದ್ದಾಗಿದೆ.
ಇಂದಿನಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಸಪ್ತಾಹ ಆರಂಭವಾಗಲಿದೆ. ಆಜಾದಿ ಕಾ ಅಮೃತಮಹೋತ್ಸವದ ನಿಮಿತ್ತ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇಂದಿನಿಂದ ಪ್ರಾರಂಭವಾಗುವ ಅಭಿಯಾನಕ್ಕೆ ಪ್ರಧಾನಿ ಮೋದಿ ಶುಭ ಕೋರಿದ್ದು, ಸರ್ಕಾರದ ಅಮೃತಮಹೋತ್ಸವದ ಸಂದರ್ಭದಲ್ಲಿ ಸರ್ವತೋಮುಖ ಅಭಿವೃದ್ಧಿ, ಸರ್ವಜನಾಂಗದ ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತದತ್ತ ಸಾಗುತ್ತಿದ್ದೇವೆ ಎಂದಿದ್ದಾರೆ.
ದೆಹಲಿಯಲ್ಲಿ ಈ ಸಪ್ತಾಹದ ಉದ್ಘಾಟನೆ ನಡೆಯಲಿದ್ದು, ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಎರಡು ವರ್ಷಗಳ ಸಾಧನೆ ಮತ್ತು ಉತ್ತಮ ಆಡಳಿತ ಸಪ್ತಾಹದ ಪೋರ್ಟಲ್ ಇಂದು ಬಿಡುಗಡೆಯಾಗಲಿದೆ. ಕೇಂದ್ರ ಸಿಬ್ಬಂದಿ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪೋರ್ಟಲ್ ಬಿಡುಗಡೆ ಮಾಡಲಿದ್ದಾರೆ. ‘ಪ್ರಶಾಸನ್ ಗಾಂವ್ ಕಿ ಓರ್’ ಈ ಬಾರಿಯ ಸಪ್ತಾಹದ ಥೀಮ್ ಆಗಿದ್ದು, ಈ ಕುರಿತ ಸಿನಿಮಾ ಬಿಡುಗಡೆ ಆಗಲಿದೆ. ಒಂದು ವಾರದ ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.