ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 25 ರಂದು ‘ಭಾರತ್ ಬಂದ್’ ಗೆ ಕರೆ ನೀಡಿದೆ. ಕಳೆದ ವರ್ಷ ನವೆಂಬರ್ನಲ್ಲಿ ಆರಂಭವಾದ ರೈತರ ಆಂದೋಲನವನ್ನು ಮತ್ತಷ್ಟು ಬಲಪಡಿಸುವ ಮತ್ತು ವಿಸ್ತರಿಸುವ ಉದ್ದೇಶದಿಂದ ಭಾರತ ಬಂದ್ಗೆ ಕರೆ ನೀಡಲಾಗಿದೆ ಎಂದು ಶುಕ್ರವಾರ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ದೆಹಲಿಯ ಸಿಂಗು ಗಡಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ಆಶಿಶ್ ಮಿತ್ತಲ್, “ನಾವು ಸೆಪ್ಟೆಂಬರ್ 25 ರಂದು ಭಾರತ್ ಬಂದ್ಗೆ ಕರೆ ನೀಡುತ್ತಿದ್ದೇವೆ. ಕಳೆದ ವರ್ಷ ಅದೇ ದಿನಾಂಕದಂದು ಇದೇ ರೀತಿಯ ‘ಬಂದ್’ ಗೆ ಕರೆ ನೀಡಿದ ನಂತರ ಪ್ರತಿಭಟನೆ ಇಂದಿಗೂ ನಡೆಯುತ್ತಿದೆ. ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆ ನಡೆದ ಕಳೆದ ವರ್ಷಕ್ಕಿಂತ ಇದು ಹೆಚ್ಚು ಯಶಸ್ವಿಯಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.
ಶುಕ್ರವಾರ ಮುಕ್ತಾಯಗೊಂಡ ರೈತರ ಅಖಿಲ ಭಾರತ ಸಮಾವೇಶದ ಸಂಯೋಜಕರಾಗಿರುವ ಮಿತ್ತಲ್, ಎರಡು ದಿನಗಳ ಕಾರ್ಯಕ್ರಮವು ಯಶಸ್ವಿಯಾಗಿದೆ ಮತ್ತು 22 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕೇವಲ 300 ಕೃಷಿ ಒಕ್ಕೂಟಗಳಲ್ಲ, ಮಹಿಳೆಯರು, ಕಾರ್ಮಿಕರು, ಬುಡಕಟ್ಟು ಜನಾಂಗದವರು ಹಾಗೂ ಯುವಕರು ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳ ಸದಸ್ಯರು ಈ ಕೃಷಿ ಹೋರಾಟದ ಭಾಗವಾಗಿದ್ದಾರೆ. ಸಮಾವೇಶದ ಸಮಯದಲ್ಲಿ, ಕಳೆದ ಒಂಬತ್ತು ತಿಂಗಳುಗಳಿಂದ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಚರ್ಚೆ, ಸಂವಾದಗಳು ನಡೆದವು. ಇದು ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ದೇಶವ್ಯಾಪಿ ಚಳುವಳಿಯನ್ನಾಗಿ ಮಾಡುವತ್ತ ಪ್ರಮುಖವಾಗಿದೆ ಎಂದು ಹೇಳಿದರು.
ಕೃಷಿ ಕಾನೂನು ವಿರೋಧಿಸಿ ಸೆ.25ಕ್ಕೆ ಭಾರತ್ ಬಂದ್ಗೆ ಕರೆ ನೀಡಿದ ರೈತ ಸಂಘಟನೆಗಳು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.