ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಚಿಸಲಿರುವ ಸರ್ಕಾರದ ಸ್ವರೂಪದ ಯಾವುದೇ ವಿವರಗಳು ಭಾರತಕ್ಕೆ ತಿಳಿದಿಲ್ಲ ಎಂದು ಸರ್ಕಾರ ಗುರುವಾರ ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಕ್ತಾರ ಅರಿಂದಮ್ ಬಾಗ್ಚಿ, ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿರುವ ಸ್ಥಳಾಂತರ ಕಾರ್ಯಾಚರಣೆ ಕಾಬೂಲ್ ವಿಮಾನ ನಿಲ್ದಾಣದಿಂದ ಪುನರಾರಂಭಗೊಳ್ಳಲಿದೆ ಎಂದಿದ್ದಾರೆ.
ಪ್ರಸ್ತುತ ಕಾಬೂಲ್ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತಿಲ್ಲ. ವಿಮಾನ ನಿಲ್ದಾಣ ಸೇವೆ ಪುನರಾರಂಭಗೊಂಡಾಗ ಕಾಬೂಲ್ನಿಂದ ಜನರನ್ನು ಸ್ಥಳಾಂತರಿಸುವ ನಮ್ಮ ಕಾರ್ಯಾಚರಣೆಯನ್ನು ನಾವು ಪುನರಾರಂಭಿಸುತ್ತೇವೆ ಎಂದು ಅವರು ಹೇಳಿದರು.
ಮುಂದಿನ ಸಭೆಗಳ ಬಗ್ಗೆ ಕೇಳಿದಾಗ ಬಾಗ್ಚಿ ಅವರು ಈ ಬಗ್ಗೆ ಯಾವುದೇ ಅಪ್ ಡೇಟ್ ಇಲ್ಲ ಎಂದು ಹೇಳಿದರು. ಅದರ ಬಗ್ಗೆ ಊಹಿಸಲು ಬಯಸುವುದಿಲ್ಲ. ಇದು ಹೌದೋ ಅಲ್ಲವೋ ಎಂಬ ವಿಷಯ ಅಲ್ಲ. ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಾರದು ಎಂಬುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಭಾರತ ಮಂಗಳವಾರ ತಾಲಿಬಾನ್ನೊಂದಿಗೆ ತನ್ನ ಮೊದಲ ಔಪಚಾರಿಕ ಸಂಪರ್ಕವನ್ನು ಸ್ಥಾಪಿಸಿತು. ಕತಾರ್ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ಭಾರತೀಯ ಮಿಷನ್ನಲ್ಲಿ ದೋಹಾದಲ್ಲಿರುವ ತಾಲಿಬಾನ್ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಅವರನ್ನು ಭೇಟಿಯಾದರು.
ಯುದ್ಧ ಪೀಡಿತ ದೇಶದಲ್ಲಿ ಭಾರತೀಯರ ಅದರಲ್ಲೂ ಅಲ್ಪಸಂಖ್ಯಾತರ ಸುರಕ್ಷತೆಯ ಕುರಿತು ಮಾತುಕತೆ ನಡೆಸಲಾಗಿದೆ ಎಂದು ವರದಿಯಾಗಿದೆ. ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಅಫ್ಘಾನ್ ನೆಲವನ್ನು ಬಳಸಬಾರದು ಎಂದು ಮಿತ್ತಲ್ ತಾಲಿಬಾನ್ ಗೆ ಒತ್ತಾಯಿಸಿದರು.